ಚಿತ್ರದುರ್ಗದ ಮರಳುಗಾಡಿನಲ್ಲಿ ಸೋನಿಯಾ ಗಾಂಧೀ
ಬೆಂಗಳೂರಿನ ಎಚ್ಎಎಲ್ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರಿನಲ್ಲಿ ಕಾಂಗ್ರೆಸ್ ಮುಖಂಡರಾದ ಕೆಪಿಸಿಸಿ ಅಧ್ಯಕ್ಷ ಡಾ. ಪರಮೇಶ್ವರ್, ಮೋಟಮ್ಮ ಮತ್ತು ಸಿದ್ದರಾಮಯ್ಯ ಅವರೊಂದಿಗೆ ನಾಗಸಮುದ್ರಕ್ಕೆ ಆಗಮಿಸಿ ಬರದಿಂದ ತತ್ತರಿಸಿರುವ ರೈತರನ್ನು ಭೇಟಿ ಮಾಡಿ ಕೇಂದ್ರದಿಂದ ನೆರವಿನ ಭರವಸೆ ನೀಡಿದರು. ಶಾಶ್ವತ ನೀರಾವರಿ ಯೋಜನೆ, ರೇಷ್ಮೆ ಬೆಳೆಗಾರರ ಸಮಸ್ಯೆ, ಎರಡು ವರ್ಷಗಳಿಂದ ಕಾಡುತ್ತಿರುವ ಬರಪರಿಸ್ಥಿತಿ ಕುರಿತಂತೆ ಜನರಿಂದ ಅಹವಾಲು ಸ್ವೀಕರಿಸಿದರು.
ಅವರನ್ನು ಕಂಡು ಅಹವಾಲು ನೀಡಲೆಂದು ಸಹಸ್ರಾರು ರೈತರು ಮತ್ತು ಬಡಜನರು ಮೊಳಕಾಲ್ಮೂರಿನಲ್ಲಿ ಕಾದು ಮನವಿಪತ್ರ ಸೋನಿಯಾ ಅವರಿಗೆ ಸಲ್ಲಿಸಿದರು. ಚಿತ್ರದುರ್ಗ ಜಿಲ್ಲೆಯ ಆರೂ ತಾಲೂಕುಗಳಲ್ಲಿ ಬರ ಪರಿಸ್ಥಿತಿ ತಲೆದೋರಿದೆ. ಅಲ್ಲಿಂದ ಅವರು ನೇರವಾಗಿ ತುಮಕೂರಿನ ಸಿದ್ಧಗಂಗಾ ಮಠಕ್ಕೆ 10.30ಕ್ಕೆ ಆಗಮಿಸಿದ್ದು, ಎಸ್ಐಟಿ ಕೆನೆಡಿ ಗೆಸ್ಟ್ ಹೌಸ್ ನಲ್ಲಿ ವಿಶ್ರಮಿಸುತ್ತಿದ್ದಾರೆ.
ಸುಮಾರು 11.30ರ ಹೊತ್ತಿಗೆ ಗುರುವಂದನೆ ಕಾರ್ಯಕ್ರಮದಲ್ಲಿ ಸೋನಿಯಾ ಗಾಂಧಿ ಭಾಗವಹಿಸುತ್ತಿದ್ದಾರೆ. ಗುರುವಂದನೆ ಕಾರ್ಯಕ್ರಮದಲ್ಲಿ ಸೋನಿಯಾ ಅವರನ್ನು ಹೊರತುಪಡಿಸಿದರೆ ಸಿದ್ಧಗಂಗಾ ಶ್ರೀಗಳಾದ ಶಿವಕುಮಾರ ಸ್ವಾಮಿಜಿ, ಮಠದ ಕಿರಿಯ ಸ್ವಾಮೀಜಿಗಳು, ಸುತ್ತೂರು ಶ್ರೀಗಳು ಮತ್ತು ಆದಿಚುಂಚನಗಿರಿ ಮಠದ ಬಾಲಗಂಗಾಧರ ಶ್ರೀಗಳು ವೇದಿಕೆಯನ್ನು ಅಲಂಕರಿಸಲಿದ್ದಾರೆ.
ಗುರುವಂದನೆ ಕಾರ್ಯಕ್ರಮದ ನಂತರ 12.50ರ ಸುಮಾರಿಗೆ ಬಿರ್ಲಾ ಆಡಿಟೋರಿಯಂನಲ್ಲಿ ಸೋನಿಯಾ ಗಾಂಧಿ ಅವರು ರಾಜ್ಯದ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿ ರಾಜ್ಯದಲ್ಲಿನ ರಾಜಕೀಯ ಪರಿಸ್ಥಿತಿ ಮತ್ತು ಬರಪರಿಸ್ಥಿತಿಯ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲಿದ್ದಾರೆ.