ಭೀಮೆಯ ಪಸೆ ಇಂಗಿ ಮೀನುಗಳ ಮಾರಣಹೋಮ
ಭೀಮಾ ನದಿಯಲ್ಲಿ ಏರುತ್ತಿರುವ ತಾಪಮಾನ ಮತ್ತು ತಗ್ಗುತ್ತಿರುವ ನೀರಿನಿಂದಾಗಿ ಸಹಸ್ರಾರು ಮೀನುಗಳು ಸಾವನ್ನಪ್ಪುತ್ತಿವೆ. ಇದರಿಂದಾಗಿ ನದಿಯ ನೀರು ಕಲುಷಿತಗೊಂಡಿದ್ದು, ಅದನ್ನು ಕುಡಿದ ಕುರಿಗಳು, ಜಾನುವಾರುಗಳು ಕೂಡ ಇಹಲೋಕ ತ್ಯಜಿಸುತ್ತಿವೆ.
ಯಾದಗಿರಿ ಜಿಲ್ಲೆಯ ಜೀವನಾಡಿ ಭೀಮಾ ನದಿ. ಲಿಂಗೇರಿ ಗ್ರಾಮದ ಹತ್ತಿರ ಕ್ರಮೇಣವಾಗಿ ನೀರು ಬತ್ತುತ್ತಿದೆ. ಭತ್ತ ಬೆಳೆದಿರುವ ರೈತರು ನೀರಾವರಿಗಾಗಿ ಭೀಮೆಯನ್ನು ಅವಲಂಬಿಸಿದ್ದಾರೆ. ಬತ್ತುತ್ತಿರುವ ನದಿಯಲ್ಲಿನ ಉಳಿದ ಅಲ್ಪ ಸ್ವಲ್ಪ ನೀರನ್ನು ಸಹ ಇಲ್ಲಿನ ರೈತರು ಪಂಪ್ ಸೆಟ್ ಬಳಸಿ ಖಾಲಿ ಮಾಡುತ್ತಿದ್ದಾರೆ.
ಮೀನುಗಳು ಸಾಯಲು ಇನ್ನೊಂದು ಕಾರಣವೆಂದರೆ, ಜನರು ಜಾನುವಾರುಗಳನ್ನು ನದಿಯಲ್ಲಿ ತೊಳೆಯುತ್ತಿದ್ದು, ಬಟ್ಟೆ ಒಗೆಯುತ್ತಾರೆ. ಇದರಿಂದಲೂ ನೀರು ಕಲುಷಿತಗೊಂಡು ಮೀನುಗಳ ಜೀವಕ್ಕೆ ಸಂಚಕಾರ ಬರುತ್ತಿದೆ. ಪರೋಕ್ಷವಾಗಿ ಭೀಮಾ ತೀರದ ಜನರೇ ಮೀನುಗಳ ಹಂತಕರಾಗುತ್ತಿದ್ದಾರೆ. ಇದಕ್ಕೆಲ್ಲ ಪರಿಹಾರವೆಂದರೆ ಮಹಾರಾಷ್ಟ್ರದ ಕೊಯ್ನಾ ಆಣೆಕಟ್ಟೆಯಿಂದ ಆದಷ್ಟು ಬೇಗನೆ ನೀರು ಬಿಡಬೇಕು ಎಂಬುದು ರೈತರ ಆಗ್ರಹ.
ಈ ಬಗ್ಗೆ ಜಿಲ್ಲಾಡಳಿತ ಮತ್ತು ರಾಜ್ಯ ಸರಕಾರ ಅಗತ್ಯವಾದ ಕ್ರಮಗಳನ್ನು ಕೂಡಲೆ ಕೈಗೊಳ್ಳಬೇಕು. ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಅನ್ನುವ ಮಾತು ಇಲ್ಲಿ ನಿಜವಾಗದಿರಲಿ. ಕುರಿ, ಜಾನುವಾರುಗಳಿಗೆ ಆದ ಗತಿ, ಆ ನದಿಯ ನೀರನ್ನು ಕುಡಿಯುವ ಜನರಿಗೂ ಆಗದಿರಲಿ ಎಂದು ಕಾತುರದಿಂದ ಪರಿಹಾರದ ನಿರೀಕ್ಷೆಯಲ್ಲಿರುವ ರೈತರು ಹೇಳುತ್ತಿದ್ದಾರೆ.