ಲಿಂಗಾಯತರ ಓಲೈಕೆಗೆ ಬಂದ ಸೋನಿಯಾಗೆ ಕಪ್ಪುಬಾವುಟ

ಶ್ರೀ ಶಿವಕುಮಾರ ಸ್ವಾಮೀಜಿಗಳ 105ನೇ ಹುಟ್ಟುಹಬ್ಬದ ನಿಮಿತ್ತ ತುಮಕೂರಿಗೆ ಬಂದಿದ್ದ ಸೋನಿಯಾ ಗಾಂಧಿ ಅವರಿಗೆ ಸಿದ್ಧಗಂಗಾ ಮಠದಲ್ಲಿ ಆಶ್ಚರ್ಯ ಕಾದಿತ್ತು. ಅವರು ಭಾಷಣ ಆರಂಭಿಸುತ್ತಿದ್ದಂತೆ ಇದ್ದಕ್ಕಿದ್ದಂತೆ ಮಹಿಳೆಯೊಬ್ಬಳು ಕಪ್ಪು ಬಟ್ಟೆಯನ್ನು ಗಾಳಿಯಲ್ಲಿ ಹಾರಿಸುತ್ತ ಧಿಕ್ಕಾರ ಕೂಗಲು ಶುರುಮಾಡಿದಳು. ಮಹಿಳೆ ಮಾದಿಗ ದಂಡೋರ ಸಮುದಾಯಕ್ಕೆ ಸೇರಿದ್ದು, ಪರಿಶಿಷ್ಟ ಜಾತಿ ಪಂಗಡಕ್ಕೆ ತಮ್ಮನ್ನು ಸೇರಿಸಬೇಕೆಂದು ಆಗ್ರಹಿಸುತ್ತಿದ್ದಳು.
ಮಹಿಳಾ ಪೊಲೀಸರ ಬದಲಾಗಿ ಅಲ್ಲಿಯೇ ಇದ್ದ ಗಂಡಸು ಪೊಲೀಸರು ಆಕೆಯನ್ನು ಅನಾಮತ್ತಾಗಿ ತಳ್ಳಿಕೊಂಡು ಸಮಾರಂಭದಿಂದ ಹೊರದಬ್ಬಿದರು. ಆಕೆಯ ಪ್ರತಿಭಟನೆಯ ಪರಿ ಯಾವರೀತಿಯದಾಗಿತ್ತೆಂದರೆ ಸೋನಿಯಾ ಕೂಡ ಕ್ಷಣ ಕಾಲ ಭಾಷಣಕ್ಕೆ ಅಲ್ಪವಿರಾಮ ಹಾಕಿ ಮೂಕವಿಸ್ಮಿತರಾಗಿ ಆ ಮಹಿಳೆಯ ಪ್ರತಿಭಟನೆಯನ್ನು ವೀಕ್ಷಿಸಬೇಕಾಯಿತು.
ತಮ್ಮ ಭಾಷಣವನ್ನು ಶ್ರೀ ಶಿವಕುಮಾರ ಸ್ವಾಮೀಜಿಗಳ ಸಮಾಜ ಸೇವೆಯನ್ನು ಹೊಗಳುವುದಕ್ಕಾಗಿ ಮೀಸಲಿಟ್ಟ ಸೋನಿಯಾ ಗಾಂಧಿ, ಗುರುವಂದನೆಗೆ ಬರುವ ಮುನ್ನ ವೀಕ್ಷಿಸಿ ಬಂದ ಚಿತ್ರದುರ್ಗ ಅಥವಾ ತುಮಕೂರು ಜಿಲ್ಲೆಯಲ್ಲಿ ಉಂಟಾಗಿರುವ ಬರ ಪರಿಸ್ಥಿತಿಯ ಬಗ್ಗೆ ಒಂದು ಹನಿಯಷ್ಟೂ ಮಾತನಾಡಲಿಲ್ಲ.
ಎಲ್ಲಾ ರೀತಿಯ ಹೊಗಳಿಕೆಗೆ ಸ್ವಾಮೀಜಿಗಳು ಅರ್ಹರಾದರೂ, ಲಿಂಗಾಯತ ಸಮುದಾಯವನ್ನು ಸೆಳೆಯಲಿಕ್ಕಾಗಿಯೇ ತಮ್ಮ ಭಾಷಣವನ್ನು ಸೋನಿಯಾ ಮೀಸಲಿಟ್ಟರಾ ಎಂಬ ಸಂಶಯ ಕಾಡುವುದು ಸಹಜ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ವೀರಶೈವ ಸಮುದಾಯದ ಬೆಂಬಲದಿಂದ ಯಡಿಯೂರಪ್ಪ ಅಧಿಕಾರಕ್ಕೆ ಬಂದಿದ್ದು ಅವರ ಕಣ್ಣ ಮುಂದೆಯೇ ಇದೆ.
ಈ ಪ್ರಾಂತ್ಯದಲ್ಲಿ ಲಿಂಗಾಯತ ಸಮುದಾಯದವರು ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಬಲಿಷ್ಠರಾಗಿರುವ ಸಂಗತಿ ಸೋನಿಯಾಗೆ ತಿಳಿಯದ ವಿಷಯವೇನಲ್ಲ. ಯಡಿಯೂರಪ್ಪನವರನ್ನು ಪದಚ್ಯುತಗೊಳಿಸಿದ ಮೇಲೆ ಲಿಂಗಾಯತ ಸಮುದಾಯದವರು ಬಿಜೆಪಿಯಿಂದ ವಿಮುಖವಾಗುವ ಸಾಧ್ಯತೆಯೂ ಹೆಚ್ಚು. ಗುರುವಂದನೆ ಸಮಾರಂಭದ ನಂತರ ಕಾಂಗ್ರೆಸ್ ನಾಯಕರನ್ನು ಉದ್ದೇಶಿಸಿ ಮುಂದಿನ ರಾಜಕೀಯ ಚಟುವಟಿಕೆಗಳ ಬಗ್ಗೆ ಸೋನಿಯಾ ಮಾತನಾಡಲಿದ್ದಾರೆ.












Click it and Unblock the Notifications