ಸುವರ್ಣ ನ್ಯೂಸ್ ವಿರುದ್ಧ 25 ಕೋಟಿ ರೂ. ಕೇಸ್
ತಮ್ಮ ವಿರುದ್ಧ ಸುಳ್ಳು ಹಾಗೂ ಮಾನಹಾನಿಕಾರಕ ವರದಿಗಳನ್ನು ಪ್ರಕಟಿಸಿದ್ದಕ್ಕಾಗಿ ಕೃಷ್ಣ ಪಾಲೇಮಾರ್ ಅವರು ಚಾನೆಲ್ ಮಾಲೀಕರು ಮತ್ತು ಸಂಪಾದಕ ಮಂಡಳಿ ವಿರುದ್ಧ 25 ಕೋಟಿ ರೂ. ಪರಿಹಾರ ಕೋರಿ ಮಂಗಳೂರು ನಗರದ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
ಫೆ. 7ರಂದು ವಿಧಾನ ಮಂಡಲದ ಅಧಿವೇಶನದ ಸಂದರ್ಭದಲ್ಲಿ ವಿಧಾನಸಭೆಯ ಕಲಾಪದ ವೇಳೆ ಸಚಿವರಾಗಿದ್ದ ಲಕ್ಷ್ಮಣ ಸವದಿ ಸೇರಿದಂತೆ ಇತರ ಇಬ್ಬರು ಸಚಿವರು ಅಶ್ಲೀಲ ದೃಶ್ಯಗಳನ್ನು ವೀಕ್ಷಿಸಿದರು ಎಂಬ ಬಗ್ಗೆ ವರದಿಯಾಗಿತ್ತು. ಲಕ್ಷ್ಮಣ ಸವದಿ ವೀಕ್ಷಿಸಿದ ದೃಶ್ಯಗಳಿಗೂ ಮತ್ತು ಹೇಳಿದ್ದಕ್ಕೂ ಸಂಬಂಧವಿಲ್ಲ. ಕೃಷ್ಣ ಪಾಲೇಮಾರ್ ಅವರನ್ನು ಅನಗತ್ಯವಾಗಿ ಈ ಪ್ರಕರಣದಲ್ಲಿ ಎಳೆದು ತರಲಾಗಿದೆ ಎಂದು ಮೊದಲು ಸುದ್ದಿವಾಹಿನಿ ವರದಿ ಮಾಡಿತ್ತು.
ಆದರೆ, ನಂತರದಲ್ಲಿ ತಮ್ಮನ್ನು ಬ್ಲ್ಯಾಕ್ ಮೇಲ್ ಮಾಡುವ ದುರುದ್ದೇಶದಿಂದ ನಾನೇ ಅಶ್ಲೀಲ ಚಿತ್ರಗಳನ್ನು ಮೊಬೈಲ್ನಿಂದ ಕಳಿಸಿಕೊಟ್ಟಿರುತ್ತೇನೆಂದು ಚಾನೆಲ್ ನಿರಂತರವಾಗಿ ಸುಳ್ಳು ಸುದ್ದಿ ಪ್ರಸಾರ ಮಾಡಿದೆ ಎಂದು ಕೃಷ್ಣಾ ಪಾಲೇಮಾರ್ ದೂರಿನಲ್ಲಿ ಆರೋಪಿಸಿದ್ದಾರೆ.
'ನನ್ನ ಮೊಬೈಲ್ನಲ್ಲಿ ಯಾವತ್ತೂ ಅಶ್ಲೀಲ ದೃಶ್ಯಗಳಿರಲಿಲ್ಲ. ತಾನು ಯಾವುದೇ ಅಶ್ಲೀಲ ದೃಶ್ಯಗಳನ್ನು ನೋಡಿಲ್ಲ. ವಿಧಾನಸಭೆಯಲ್ಲಿ ಅಶ್ಲೀಲ ದೃಶ್ಯಗಳ ವೀಕ್ಷಣೆಗೂ ನನಗೂ ಯಾವುದೇ ರೀತಿಯ ಸಂಬಂಧವಿಲ್ಲ. ಸರ್ಕಾರದ ಗೌರವ ಉಳಿಸಲು ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದೇನೆ. ಸದನ ಸಮಿತಿ ನನ್ನನ್ನು ನಿರಪರಾಧಿ ಎಂದು ಹೇಳಿದೆ. ಆದರೆ, ಕಂಪ್ಯೂಟರ್ ತಂತ್ರಜ್ಞಾನ ಬಳಸಿ ನನ್ನ ಬಗ್ಗೆ ನಿರಂತರವಾಗಿ ಸುಳ್ಳು ಮತ್ತು ಕಪೋಲಕಲ್ಪಿತ ವರದಿಗಳನ್ನು ಪ್ರಸಾರ ಮಾಡಿ ನನ್ನ ತೇಜೋವಧೆ ಮಾಡಿದ ಚಾನೆಲ್ಗೆ 25 ಕೋಟಿ ರೂ. ದಂಡ ವಿಧಿಸಬೇಕು' ಎಂದು ನ್ಯಾಯಾಲಯಕ್ಕೆ ಅವರು ಮನವಿ ಮಾಡಿದ್ದಾರೆ.
ಈಗಾಗಲೇ ಸುವರ್ಣ ಚಾನೆಲ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದ್ದು, ನ್ಯಾಯಾಲಯದ ಆದೇಶದಂತೆ ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತ್ತೀಚೆಗೆ Times Now ರಾಷ್ಟ್ರೀಯ ಚಾನೆಲ್ ವಿರುದ್ಧ ಇದೇ ಮಾದರಿಯಲ್ಲಿ 100 ಕೋಟಿ ರು. ಪರಿಹಾರ ಕೋರಿ ಸುಪ್ರೀಂಕೋರ್ಟಿನ ನಿವೃತ್ತ ಜಡ್ಜ್ ಪಿ ಬಿ ಸಾವಂತ್ ಅವರು ಕೇಸು ದಾಖಲಿಸಿದ್ದರು ಎಂದು ಕೃಷ್ಣ ಜೆ. ಪಾಲೆಮಾರ್ ಪರವಾಗಿ ದಾವೆ ದಾಖಲಿಸಿ ವಾದಿಸುತ್ತಿರುವ ವಕೀಲ ಪಿ.ಪಿ. ಹೆಗ್ಡೆ ಅವರು ಕೋರ್ಟ್ ಗಮನ ಸೆಳೆದಿದ್ದಾರೆ.