ನಮಗಷ್ಟೇ ಏಕೆ, ಜಾನುವಾರುಗಳಿಗೂ ಬೇಕು ಸೊಳ್ಳೆ ಪರದೆ!
ಹೌದು ಸ್ವಾಮಿ, ಸೊಳ್ಳೆಗಳಿಗೆ ತೆಳು ಚರ್ಮ ಅಥವಾ ದಪ್ಪ ಚರ್ಮ ಅಂತ ಭೇದಭಾವ ಮಾಡುವುದೇ ಇಲ್ಲ. ರಕ್ತ ಹೀರಲು ಯಾರಾದರೇನು ಶಿವಾ ಅಂತ ಯಾದಗಿರಿ ಜಿಲ್ಲೆಯಲ್ಲಿ ಜಾನುವಾರುಗಳನ್ನು ವಿಪರೀತ ಕಾಡುತ್ತಿವೆ. ಜಾನುವಾರುಗಳಿಗೆ ಮೇವಿನ ಜೊತೆಗೆ ಸೊಳ್ಳೆಗಳ ಕಾಟ ಶುರುವಾಗಿದೆ. ಇದು ಎತ್ತು ಎಮ್ಮೆಗಳಿಗೆ ಮಾತ್ರವಲ್ಲ ಅವರ ಮಾಲಿಕರಾದ ರೈತರಿಗೂ ಸಾಕಷ್ಟು ಚಿಂತೆಗೀಡು ಮಾಡಿವೆ.
ಯಾದಗಿರಿ ಜಿಲ್ಲೆಯಲ್ಲಿ ಭತ್ತದ ಬೆಳೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ಸೊಳ್ಳೆ ಕಾಟವೂ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ರೈತರು ಜಾನುವಾರುಗಳನ್ನು ಸೊಳ್ಳೆಯಿಂದ ರಕ್ಷಿಸಲು ಸೊಳ್ಳೆ ಪರದೆಗಳ ಮೊರೆ ಹೋಗಿದ್ದಾರೆ. ಆಂಧ್ರಪ್ರದೇಶದ ವಲಸಿಗರು ಭತ್ತಕ್ಕೆ ಹೇರಳವಾಗಿ ರಾಸಾಯನಿಕ ಔಷಧಿಗಳನ್ನು ಸಿಂಪಡಿಸುತ್ತಿದ್ದಾರೆ. ಆ ಕಾರಣಕ್ಕೆ ಜಿಲ್ಲೆಯ ಅನೇಕ ಗ್ರಾಮಗಳಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿದೆ.
ಕೃಷ್ಣಾ ಭಾಗ್ಯ ಜಲ ನಿಗಮ ನಾರಾಯಣಪುರ ಎಡದಂಡೆ ಕಾಲುವೆಯಿಂದಾಗಿ ನೀರಾವರಿ ಸೌಲಭ್ಯ ಪಡೆದಿರುವ ಈ ಪ್ರದೇಶದಲ್ಲಿ ಸೊಳ್ಳೆಗಳ ಕಾಟ ವಿಪರೀತವಾಗಿದೆ. ಸೊಳ್ಳೆಗಳಿಂದ ತಪ್ಪಿಸಿಕೊಳ್ಳಲು ಅದೆಷ್ಟೋ ಹರಸಾಹಸ ಮಾಡಿದರೂ, ಅವೆಲ್ಲವೂ ವ್ಯರ್ಥವಾಗುತ್ತಿವೆ. ಸಂಜೆಯ ವೇಳೆ ಬೇವಿನ ಸೊಪ್ಪಿನಿಂದ ಹೊಗೆ ಹಾಕಿ ಸೊಳ್ಳೆಗಳನ್ನು ಓಡಿಸಲು ಇಲ್ಲಿಯ ಗ್ರಾಮಸ್ಥರು ಸಾಕಷ್ಟು ಪರಿಶ್ರಮ ಪಡುತ್ತಿದ್ದಾರೆ. ಆದರೂ ಸೊಳ್ಳೆಗಳ ಕಾಟದಿಂದ ಮುಕ್ತಿ ಮಾತ್ರ ದೊರೆಯುತ್ತಿಲ್ಲ.
ಸೊಳ್ಳೆ ಕಚ್ಚುವುದರಿಂದ ದನಗಳಿಗೆ ಇಲ್ಲದ ರೋಗ ಬರತೊಡಗಿವೆ. ಹಾಗಾಗಿ ರೈತರು ಸೊಳ್ಳೆ ಕಾಟ ತಪ್ಪಿಸಲು ದನಗಳಿಗೆ ಸೊಳ್ಳೆ ಪರದೆ ಕಟ್ಟಿ ಅವುಗಳನ್ನು ರಕ್ಷಿಸತೊಡಗಿದ್ದಾರೆ. ಸೊಳ್ಳೆಗಳ ಕಾಟ ಕೇವಲ ಒಂದು ಗ್ರಾಮಕ್ಕೆ ಮಾತ್ರ ಸೀಮಿತವಾಗಿಲ್ಲ. ವಡಗೇರಾ, ಬೆಂಡೆಗಂಮಳಿ, ದೇವಾಪುರ್, ತುಮಕೂರು ಸೇರಿದಂತೆ ಯಾದಗಿರಿ ಪಟ್ಟಣಕ್ಕೆ ವಿಸ್ತರಿಸಿದೆ. ಇದರಿಂದ ಸೊಳ್ಳೆ ಪರದೆ ಮಾರಾಟಗಾರರಿಗೆ ಮಾತ್ರ ಸಾಕಷ್ಟು ಲಾಭ ಆಗುತ್ತಿದೆ ಎನ್ನುತ್ತಿದ್ದಾರೆ ಇಲ್ಲಿಯ ರೈತರು.
ಸೊಳ್ಳೆ ಪರದೆ ಜೋಕ್ : ವಿಪರೀತ ಸೊಳ್ಳೆ ಕಾಟ ಇದ್ದರೂ ಗುಂಡ ಸೊಳ್ಳೆ ಪರದೆ ಕಟ್ಟಿದ್ದರೂ ಹೊರಗೆ ಮಲಗಿರುತ್ತಾನೆ. ತಿಮ್ಮ ಬಂದು, "ಯಾಕೆ ಗುರೂ ಪರದೆ ಕಟ್ಟಿದ್ರೂ ಹೊರಗೆ ಮಲಗಿದ್ದೀಯಾ?" ಅಂತಾನೆ. "ನಾನು ಸೊಳ್ಳೆಗಳಿಗಿಂತ ಜಾಣ ಕಣೋ. ನಾನು ಒಳಗೆ ಮಲಗಿರ್ತೀನಂತ ಸೊಳ್ಳೆಗಳೆಲ್ಲ ಒಳಗೆ ಹೋಗಿಬಿಡುತ್ತವೆ. ನಾನು ಆರಾಮವಾಗಿ ಹೊರಗೆ ಮಲಗಿಬಿಡುತ್ತೇನೆ. ಎಂಗೈತೆ?"