ಮಣಪ್ಪುರಂ ಫೈನಾನ್ಸ್: ಮಣಗಟ್ಟಲೆ ಚಿನ್ನ ಹೋಯ್ತು
ಮಣಪ್ಪುರ ಕಚೇರಿಯ ಸೆಕ್ಯೂರಿಟಿ ಗಾರ್ಡ್ಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ 'ಕಚೇರಿಯ ರಿಜಿಸ್ಟರ್ ತೆಗೆದುಕೊಂಡು ಪಕ್ಕದ ಕಚೇರಿಗೆ ಬಾ' ಎಂದು ತಿಳಿಸಿದ್ದಾನೆ. ಅದರಂತೆ ಸೆಕ್ಯೂರಿಟಿ ಗಾರ್ಡ್ ಇನ್ನೊಂದು ಕಚೇರಿಗೆ ಬಂದಾಗ ಅಲ್ಲಿ ಯಾರೂ ಇರಲಿಲ್ಲ. ತಕ್ಷಣ ಆತ ಭವಾನಿ ಪೇಟೆಯ ಕಚೇರಿಗೆ ವಾಪಸಾದಾಗ ಭದ್ರತಾ ಕೊಠಡಿಯಲ್ಲಿದ್ದ 17.50 ಕೆ.ಜಿ. ಚಿನ್ನ ಮತ್ತು 6.34 ಲಕ್ಷ ರೂ. ನಗದು ನಾಪತ್ತೆಯಾಗಿರುವುದು ಪತ್ತೆಯಾಗಿದೆ.
ಗ್ರಾಹಕ ಹರೋಹರ: ಮಣಪ್ಪುರಂ ಕಚೇರಿಯ ಮ್ಯಾನೇಜರ್ ವಿದ್ಯಾಧರ ಸಾಠೆ ಅವರು ಘಟನೆಯ ಬಗ್ಗೆ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಕಚೇರಿಯೊಳಗೆ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಿದ್ದರೂ, ಭದ್ರತಾ ಕೊಠಡಿಯಲ್ಲಿದ್ದ ಸಿಸಿಟಿವಿ ಕೆಲಸ ಮಾಡುತ್ತಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಕ್ಯಾಮರಾದಲ್ಲಿರುವ ವಿಡಿಯೋ ಪರಿಶೀಲಿಸಲಾಗುತ್ತಿದ್ದು, ಕಚೇರಿಯ ಎಲ್ಲ ಸಿಬಂದಿಯನ್ನು ವಿಚಾರಣೆ ಮಾಡಲಾಗುತ್ತಿದೆ ಎಂದು ಪೊಲೀಸ್ ಇನ್ಸ್ಪೆಕ್ಟರ್ ಸಂದೀಪ್ ಸಾವಂತ್ ತಿಳಿಸಿದ್ದಾರೆ.
ಇದೇ ವೇಳೆ ಮಣಪ್ಪುರಂ ಫೈನಾನ್ಸ್ ಸಂಸ್ಥೆಯಲ್ಲಿ ಚಿನ್ನಾಭರಣ ಗಿರವಿಯಿಟ್ಟು ಸಾಲ ಪಡೆದಿರುವ ಗ್ರಾಹಕರು ತಮ್ಮ ಚಿನ್ನ ಮರಳಿ ಪಡೆಯಲು ಕಚೇರಿ ಮುಂದೆ ಭಾರಿ ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದರು. ದರೋಡೆಯಾಗಿರುವ ಚಿನ್ನ ಪತ್ತೆಯಾಗದೇ ಹೋದರೂ ಆದಷ್ಟು ಶೀಘ್ರವೇ ಗ್ರಾಹಕರ ಚಿನ್ನವನ್ನು ವಾಪಸ್ ನೀಡುವುದಾಗಿ ಕಚೇರಿಯ ಅಧಿಕಾರಿಗಳು ಗ್ರಾಹಕರಿಗೆ ಭರವಸೆ ನೀಡಿದ್ದಾರೆ.