ಬಾವಿಯಲಿ ಬೆಳಕು : ಪವಾಡವೋ, ಮೂಢನಂಬಿಕೆಯೋ?
ಯಾದಗಿರಿ ಜಿಲ್ಲೆ ಚಿಂತಕುಂಟಾ ಗ್ರಾಮದ ವಿಶ್ವನಾಥರೆಡ್ಡಿ ಎನ್ನುವವರ ಜಮೀನಿನಲ್ಲಿರುವ ಈ ಬಾವಿ ತುಂಬಾ ಪುರಾತನವಾಗಿದ್ದು, ಗ್ರಾಮದಲ್ಲಿ ಜರುಗುವ ಯಾವುದೇ ಸಂಪ್ರದಾಯದ ಪೂಜೆಗಳು ಇಲ್ಲಿಯೇ ನಡೆಯುತ್ತವೆ. ಆ ಬಾವಿಯಲ್ಲಿ ಮೂರು ನಾಲ್ಕು ದಿನಗಳಿಂದ ಪ್ರಕಾಶಮಾನ ಬೆಳಕು ಹೊರಹೊಮ್ಮುತಿದೆ. ಸಂಜೆ 7 ಗಂಟೆಯಿಂದ ಬೆಳಗಿನ ಜಾವ 6 ಗಂಟೆಯವರಿಗೂ ಮಾತ್ರ ಈ ಬೆಳಕು ಕಾಣತೊಡಗಿದೆ.
ಜನ ಮರುಳೋ ಜಾತ್ರೆ ಮರುಳೋ ಎಂಬಂತೆ ಕುತೂಹಲದಿಂದ ಗ್ರಾಮದ ಜನರು ಹಾಗೂ ಜಿಲ್ಲೆಯ ಜನರು ತಂಡೋಪತಂಡವಾಗಿ ಬರುತ್ತಿದ್ದಾರೆ. ನಿಸರ್ಗದಲ್ಲಿ ಹಲವಾರು ವಿಸ್ಮಯಕಾರಿ ಘಟನೆಗಳು ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಅನಾಹುತ ಕಾದಿದೆ ಎಂದು ಹಳ್ಳಿಯ ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಕೆಲವರು ಬಾವಿಗೆ ಕೈಮುಗಿದು, ಇದು ದೈವರ ಕೈವಾಡವೇ ಎನ್ನುತ್ತಿದ್ದಾರೆ.
ಇದೆ ತಿಂಗಳು 11ರಂದು ಮದುವೆ ಸಂಪ್ರದಾಯದ ಗಂಗೆಪೂಜೆ ಮಾಡಲು ಕೆಲ ಜನರು ಈ ಬಾವಿಯಲ್ಲಿ ಇಳಿಯುತ್ತಿದ್ದಂತೆ ನೀರಿನ ಆಳದಿಂದ ಬೆಳಕು ಬಂದಿದೆ. ಬೆಳಕಿನ ಕಿರಣಗಳು ಆಳದಿಂದ ಹೊರ ಹೊಮ್ಮಿದ್ದರಿಂದ ಸಣ್ಣ ಸಣ್ಣ ಮೀನುಗಳು ನೀರಿನಲ್ಲಿ ಈಜಾಡುವುದನ್ನು ನೋಡಿದ್ದಾರೆ ಅಂತಾರೆ ವಿಶ್ವನಾಥರೆಡ್ಡಿ. ಬಾವಿಯಲ್ಲಿ ಕಂಡಿದೆ ಎನ್ನಲಾದ ಬೆಳಕನ್ನು ದೇವರ ಪವಾಡಕ್ಕೆ ತಳುಕು ಹಾಕುತ್ತಾರೆ ಇಲ್ಲಿನ ಜನರು.
ಈ ಕುರಿತು ಸ್ಥಳೀಯ ಪತ್ರಿಕೆಗಳಲ್ಲಿ ರಸವಾತ್ತಾದ ವರದಿಗಳನ್ನು ಮಾಡಲಾಗಿತ್ತು. ಇದರ ಪರಿಣಾಮವಾಗಿ ಯಾದಗಿರಿ ತಹಸೀಲ್ದಾರ ಜವರೇಗೌಡ ಹಾಗೂ ಅವರ ಸಿಬ್ಬಂದಿ ಮತ್ತು ಯಾದಗಿರಿ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿ ಸೋಮವಾರ ರಾತ್ರಿ 9ರ ಸುಮಾರಿಗೆ ಚಿಂತಕುಂಟಾ ಗ್ರಾಮಕ್ಕೆ ಭೇಟಿ ನೀಡಿ ಬಾವಿಯನ್ನು ಕೂಲಂಕುಷವಾಗಿ ಪರಿಶೀಲಿಸಿದ್ದಾರೆ.
ರಾತ್ರಿ ಸಮಯವಾಗಿದ್ದರಿಂದ ಕ್ಯಾಮೆರಾ ಬೆಳಕು ಬಾವಿಯ ನೀರಿನಲ್ಲಿ ಬಿದ್ದಿದರಿಂದ ಪ್ರಕಾಶ ಮಾನವಾಗಿ ಬೆಳಕು ಬೀಳುವ ಕುರಿತು ಅನುಭವಕ್ಕೆ ಬರಲಿಲ್ಲ ಅಂತಾರೆ ತಹಶೀಲ್ದಾರ್ ಜವರೇಗೌಡ. ಬಾವಿಯ ಆಳವನ್ನು ಸರಳವಾಗಿ ಕಂಡು ಹಿಡಿದ ಗಣಿ ಇಲಾಖೆಯ ಅಧಿಕಾರಿಗಳು ನೀರಿನ ಸ್ಯಾಂಪಲ್ ತೆಗೆದುಕೊಂಡು ಪರೀಕ್ಷೆ ನಡೆಸಲಿದ್ದಾರೆ. ತಾವು ಗಮನಿಸಿದಂತೆ ಬಾವಿಯಲ್ಲಿ ಯಾವುದೇ ಬೆಳಕು ಬಂದಿಲ್ಲ ಎಂದು ಹೇಳುವ ಅವರು ಇದನ್ನು ವಿಸ್ಮಯ ಎಂದು ಹೇಳಲಾಗದು ಅಂತಾರೆ ಅವರು. ಇದನ್ನು ಒಪ್ಪಲು ಹಳ್ಳಿಯ ಜನರು ಸಿದ್ಧರಿಲ್ಲ.