ಸದಾನಂದ ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್, ಆದರೆ...
ಸಚಿವಕಾಂಕ್ಷಿ ಶಾಸಕರ ಸಂಭಾವ್ಯ ಪಟ್ಟಿಯನ್ನು ಸಿದ್ಧಪಡಿಸಿಕೊಂಡು ದೆಹಲಿಗೆ ತೆರಳಿದ ಸದಾನಂದ ಗೌಡರಿಗೆ ಅರ್ಧ ಜಯ ಮಾತ್ರ ಸಿಕ್ಕಿದೆ. ಸಂಪುಟ ವಿಸ್ತರಣೆಗೆ ಓಕೆ ಎಂದಿರುವ ಹೈಕಮಾಂಡ್, ದಿನಾಂಕ ನಿಗದಿ ಮಾತ್ರ ಯಡಿಯೂರಪ್ಪ ಕೋರ್ಟ್ ಭವಿಷ್ಯ ನಿರ್ಧಾರದ ನಂತರ ಎಂದು ಹೇಳಿದೆ.
ಏ.20ರಂದು ಸಿಇಸಿ ವರದಿ ಆಧಾರದ ಮೇಲೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆರೋಪಗಳ ಬಗ್ಗೆ ಸುಪ್ರೀಂಕೋರ್ಟ್ ತೀರ್ಪು ನೀಡಲಿದೆ. ತೀರ್ಪು ಬಂದ ನಂತರ ನಿಮ್ಮ ಸಂಪುಟ ವಿಸ್ತರಿಸಿ, ಸುಮ್ಮನೆ ಬಿಕ್ಕಟ್ಟು ಉಲ್ಬಣಕ್ಕೆ ಕಾರಣರಾಗಬೇಡಿ ಎಂದು ಗಡ್ಕರಿ ಅವರು ಸದಾನಂದ ಗೌಡರಿಗೆ ಸಲಹೆ ನೀಡಿದ್ದಾರೆ.
ಒಂದು ಗಂಟೆ ಚರ್ಚೆ: ನಾಗಪುರಕ್ಕೆ ತೆರಳುವ ಅವಸರದಲ್ಲಿದ್ದ ಗಡ್ಕರಿ ಅವರು ಸದಾನಂದ ಗೌಡರ ಜೊತೆ ಒಂದು ಗಂಟೆ ಕಾಲ ಚರ್ಚಿಸಿದರು. ಕೋರ್ಟ್ ತೀರ್ಪಿಗೂ ಮುನ್ನ ಸಂಪುಟ ವಿಸ್ತರಿಸಿ ಕುರ್ಚಿಭದ್ರಪಡಿಸಿಕೊಳ್ಳುವ ಸಿಎಂ ಸದಾನಂದ ಗೌಡರ ಯೋಜನೆಗೆ ಬ್ರೇಕ್ ಹಾಕಿದ ಗಡ್ಕರಿ, ಯಡಿಯೂರಪ್ಪ ಅವರನ್ನು ತೆಗೆದು ಹಾಕುವಂತಿಲ್ಲ. ಎಲ್ಲರನ್ನೂ ಸರಿದೂಗಿಸಿಕೊಂಡು ಹೋಗುವ ಪ್ರಯತ್ನ ಮಾಡಿ ಎಂದು ಹೇಳಿ ಬಿಟ್ಟಿದ್ದಾರೆ.