ಚಿನ್ನ: 'ಬಡ್ಡಿ' ಕಂಪನಿಗಳಿಗೆ ಹೈಕೋರ್ಟ್ ತರಾಟೆ

gold-loan-karnataka-high-court-nbfc
ಬೆಂಗಳೂರು, ಏ.14: ಚಿನ್ನದ ಮೇಲಿನ ಸಾಲದ ಬಗ್ಗೆ ಎಷ್ಟು ಜಾಗೃತಿ ಮೂಡಿಸಿದರೂ ಸಾಲದಾಗಿದೆ. ಅಮಾಯಕ ಜನ ಒಡೆವೆಯೂ ಹೋಯಿತು, ದುಡ್ಡೂ ಹೋಯಿತು, ಮಾನವೂ ಹೋಯಿತು ಎಂದು ಹಲಬುವುದನ್ನು ಆಗಾಗ್ಗೆ ಕೇಳುತ್ತಲೇ ಇರುತ್ತೇವೆ. ಈ ನಿಟ್ಟಿನಲ್ಲಿ ಕಳೆದ ಮಾಸಾಂತ್ಯ ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ಚಾಟಿ ಏಟು ಬೀಸಿರುವ ಆರ್ ಬಿಐ ಒಂದಷ್ಟು ಮಾರ್ಗಸೂಚಿಗಳನ್ನು ನಿಗದಿಪಡಿಸಿದೆ.

ಇಲ್ಲಿ ಮುಖ್ಯ ವಿಷಯಕ್ಕೆ ಬರುವ ಮುನ್ನ ಒಂದು ವಿಷಯವನ್ನು ಓದುಗರ ಗಮನಕ್ಕೆ ತರಬೇಕು - ಕೇರಳ ರಾಜ್ಯದಲ್ಲಿ ವಾರ್ಷಿಕ ವಹಿವಾಟು ಅಂದಾಜು 4,000 ಕೋಟಿ ರುಪಾಯಿ ಭೂಗತ, ಕಾನೂನುಬಾಹಿರ ಚಿನ್ನದ ವಹಿವಾಟು ನಡೆಯುತ್ತದೆ. ಅಂದರೆ ಮುಖ್ಯವಾಹಿನಿಯಲ್ಲಿ ಕಾನೂನಿಗೆ ಅನುಗುಣವಾಗಿ ನಡೆಯುವ ವಹಿವಾಟಿನಲ್ಲಿ ಶೇ. 20ರಷ್ಟು. ಖಾಸಗಿ ಹಣಕಾಸು ಕಂಪನಿಗಳಲ್ಲಿ ಅಡ ಇಟ್ಟಿರುವ ಟನ್ ಗಟ್ಟಲೆ ಚಿನ್ನ ಈ ಭೂಗತ ಚಿನ್ನದ ವಹಿವಾಟಿಗೆ ನೆರವಾಗುತ್ತದೆ.

ಇನ್ನು ವಿಷಯಕ್ಕೆ ಬರುವುದಾದರೆ... 'ಚಿನ್ನಾಭರಣಗಳನ್ನು ಅಡ ಇಟ್ಟುಕೊಂಡು ಗ್ರಾಹಕರಿಂದ ನಿಯಮಬಾಹಿರವಾಗಿ ಹೆಚ್ಚು ಬಡ್ಡಿ ಹಣ ವಸೂಲಿ ಮಾಡುತ್ತಿರುವ ಖಾಸಗಿ ಹಣಕಾಸು ಸಂಸ್ಥೆಗಳ' ವಿರುದ್ಧ ಹೈಕೋರ್ಟ್ ಕಿಡಿಕಾರಿದೆ.

'ನಿಯಮ ಪ್ರಕಾರ ಬಡ್ಡಿ ವಸೂಲಿ ಮಾಡದೆ, ಅದಕ್ಕಿಂತ ಹೆಚ್ಚು ವಸೂಲಿ ಮಾಡಿದರೆ ಅಂಥವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಕೂಡಲೇ ಕಾರ್ಯಪ್ರವೃತ್ತರಾಗಿ' ಎಂದು ಸರ್ಕಾರಕ್ಕೆ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರನ್ನೊಳಗೊಂಡ ವಿಭಾಗೀಯ ಪೀಠ ಶುಕ್ರವಾರ ನಿರ್ದೇಶಿಸಿದೆ.

ಇಲ್ಲಿಯವರೆಗೆ ಸರ್ಕಾರ ಈ ನಿಟ್ಟಿನಲ್ಲಿ ಮೌನ ತಾಳಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಪೀಠ, ಯಾರ ವಿರುದ್ಧ? ಯಾವ ರೀತಿಯ ಕ್ರಮ ತೆಗೆದುಕೊಳ್ಳಲಾಗಿದೆ ಎಂಬ ಬಗ್ಗೆಯೂ ತಮಗೆ ಆರು ವಾರಗಳಲ್ಲಿ ಮಾಹಿತಿ ನೀಡಬೇಕು ಎಂದು ಪೀಠ ಸ್ಪಷ್ಟಪಡಿಸಿದೆ. ವಿಚಾರಣೆಯನ್ನು ಜೂನ್ ತಿಂಗಳಿಗೆ ಮುಂದೂಡಲಾಗಿದೆ.

ಮಣಪ್ಪುರಂ, ಮುತ್ತೂಟ್ ಸೇರಿದಂತೆ ಇತರ ಖಾಸಗಿ ಸಂಸ್ಥೆಗಳ ವಿರುದ್ಧ ಡಿ.ಎಂ. ಸುರೇಶ್ ಬಾಬು ಎನ್ನುವವರು ಮಾರ್ಚ್ 16ರಂದು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳು ನಡೆಸುತ್ತಿದ್ದಾರೆ. ಮಾಸಿಕ ಶೇ.1 ರಷ್ಟು ಬಡ್ಡಿ ಹಣ ಪಡೆದುಕೊಳ್ಳುವುದಾಗಿ ಪತ್ರಿಕೆಗಳಲ್ಲಿ ಜಾಹೀರಾತು ನೀಡಿ ಶೇ. 30 ರಿಂದ 36 ರಷ್ಟು ಬಡ್ಡಿ ಪಡೆದುಕೊಂಡು ಈ ಸಂಸ್ಥೆಗಳು ಜನತೆಗೆ ವಂಚಿಸುತ್ತಿವೆ ಎನ್ನುವುದು ಅರ್ಜಿದಾರರ ಆರೋಪ.

ಅರ್ಜಿದಾರರು ಮಾಹಿತಿ ಹಕ್ಕು ಕಾಯ್ದೆ ಅಡಿ ಅರ್ಜಿ ಸಲ್ಲಿಸಿ ಕಾನೂನಿನ ಅಡಿ ಎಷ್ಟು ಬಡ್ಡಿ ಹಣ ವಸೂಲಿ ಮಾಡಬೇಕು ಎಂಬ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಭದ್ರತಾ ಸಾಲವಾದರೆ ವಾರ್ಷಿಕ ಶೇ 14 ಹಾಗೂ ಭದ್ರತಾರಹಿತ ಸಾಲವಾದರೆ ಶೇ 16ರಷ್ಟು ಹಣ ವಸೂಲಿ ಮಾಡಬೇಕು ಎನ್ನುವುದು ರಾಜ್ಯ ಸರ್ಕಾರ ರೂಪಿಸಿರುವ ನಿಯಮ. ಆದರೆ ಇದಕ್ಕಿಂತ 3 ರಿಂದ 4 ಪಟ್ಟು ಹೆಚ್ಚಿಗೆ ಹಣ ವಸೂಲಿ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಈ ಅರ್ಜಿಯು ವಿಚಾರಣೆಗೆ ಬಂದಾಗ, ತಪ್ಪಿತಸ್ಥರ ವಿರುದ್ಧ ಏನು ಕ್ರಮ ತೆಗೆದುಕೊಂಡಿದ್ದೀರಿ ಎಂದು ಸರ್ಕಾರದ ಪರ ವಕೀಲರನ್ನು ಉದ್ದೇಶಿಸಿ ನ್ಯಾಯಮೂರ್ತಿಗಳು ಪ್ರಶ್ನಿಸಿದರು. ಅದಕ್ಕೆ ವಕೀಲರು, ಮುತ್ತೂಟ್ ಹಾಗೂ ಮಣಪ್ಪುರಂ ಸಂಸ್ಥೆಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದರು. ಆದರೆ ತಪ್ಪಿತಸ್ಥರ ವಿರುದ್ಧ ಈವರೆಗೆ ಗಂಭೀರವಾಗಿ ಯಾವುದೇ ಕ್ರಮ ತೆಗೆದುಕೊಳ್ಳದ ಬಗ್ಗೆ ನ್ಯಾಯಮೂರ್ತಿಗಳು ತೀವ್ರ ವಿಷಾದ ವ್ಯಕ್ತಪಡಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+