2,206 ಕೋಟಿ ಅನುದಾನ ಕೊಡಿ ಸಾಕು: ಡಿವಿಎಸ್
ನವದೆಹಲಿ, ಏ.12 ರಾಜ್ಯದಲ್ಲಿರುವ ಭೀಕರ ಸ್ವರೂಪದ ಬರ ನಿರ್ವಹಣೆಗೆ 2,206 ಕೋಟಿ ರುಪಾಯಿ ಅನುದಾನda ಅಗತ್ಯವಿದೆ. ಕೇಂದ್ರ ಸರ್ಕಾರ ಶೀಘ್ರದಲ್ಲೇ ಅನುದಾನ ಬಿಡುಗಡೆ ಮಾಡಿ ಸಹಕರಿಸಬೇಕು ಎಂದು ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಮನವಿ ಮಾಡಿದ್ದಾರೆ.
ಕೇಂದ್ರ ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಅವರು ರಾಜ್ಯ ಸರ್ಕಾರದ 42,030 ಕೋಟಿ ರೂ.ಮೊತ್ತದ ಯೋಜನಾ ಗಾತ್ರಕ್ಕೆ ಅಂಗೀಕಾರ ನೀಡಿದ್ದಾರೆ. ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನ-ಮಾನ ಕಲ್ಪಿಸುವ ಸಂವಿಧಾನದ 371 'ಡಿ' ವಿಧಿಗೆ ತಿದ್ದುಪಡಿ ತಂದು ಆ ಪ್ರದೇಶದ ಅಭಿವೃದ್ಧಿಗೆ ನೆರವಾಗಬೇಕು ಎಂದು ಕರ್ನಾಟಕ ಸರ್ಕಾರ ಮತ್ತೊಮ್ಮೆ ಮನವಿ ಸಲ್ಲಿಸಿದೆ.

ರೇಷ್ಮೆ ನೂಲಿನ ಮೇಲಿನ ಆಮದು ಶುಲ್ಕ ಹೆಚ್ಚಳ, ವಿದ್ಯುತ್ ಯೋಜನೆಗಳಿಗೆ ಕಲ್ಲಿದ್ದಲು ಒದಗಿಸುವುದು, ರೈಲ್ವೆ ಯೋಜನೆಗಳ ಶೀಘ್ರ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದೇನೆ ಎಂದ ಸದಾನಂದ ಗೌಡ, ಆಡಳಿತ ಸುಧಾರಣೆಗೆ 'ಸಕಾಲ" ಕಾಯ್ದೆಯನ್ನು ರಾಜ್ಯಾದ್ಯಂತ ಜಾರಿಗೊಳಿಸಲಾಗಿದೆ ಎಂದು ಹೇಳಿದರು.
ಡಿವಿಎಸ್ ಗೆ ಯೋಜನಾ ಆಯೋಗ ಪ್ರಶಂಸೆ: ಪ್ರಥಮ ಬಾರಿಗೆ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಡಿವಿ ಸದಾನಂದ ಗೌಡರು, ಕೃಷಿ, ನೀರಾವರಿ ಜೊತೆಗೆ ಬೆಂಗಳೂರು ಅಭಿವೃದ್ಧಿಗೂ ಹೆಚ್ಚಿನ ಒತ್ತು ನೀಡಿರುವುದು ಶ್ಲಾಘನೀಯ ಎಂದು ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಹೇಳಿದ್ದಾರೆ.
ವಿವಿಧ ಸಂಸ್ಥೆಗಳ ಮೂಲಕ ಬೆಂಗಳೂರು ನಗರದ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಯೋಜನೆ ಮತ್ತು ಕಾಮಗಾರಿಗಳಿಗಾಗಿ ಒಟ್ಟಾರೆ 5,500 ಕೋಟಿ ರೂ.ಗಳನ್ನು ಒದಗಿಸಲಾಗಿದೆ ಎಂದು ಸದಾನಂದ ಗೌಡರು ಹೇಳಿದರು.
ಬೈಯಪ್ಪನ ಹಳ್ಳಿಯಿಂದ ಮಹಾತ್ಮಾ ಗಾಂಧಿ ರಸ್ತೆವರೆಗೆ 6.5 ಕಿ.ಮೀ. ಮಾರ್ಗ-1ನ್ನು ಉದ್ಘಾಟಿಸುವುದರ ಮೂಲಕ ಬೆಂಗಳೂರಿನಲ್ಲಿ ಮೆಟ್ರೋ ರೈಲು ಸಾಕಾರಗೊಂಡಿದೆ. ಮುಂದಿನ 9 ತಿಂಗಳೊಳಗೆ ಇನ್ನೂ 10.4 ಕಿ.ಮೀ. ಮಾರ್ಗವನ್ನು ಪ್ರಾರಂಭಿಸಲು ಯೋಜಿಸಲಾಗಿದೆ.
ಡಿಸೆಂಬರ್ 2013ರೊಳಗಾಗಿ ಇಡೀ ಹಂತ-1ನ್ನು ಪೂರ್ಣಗೊಳಿಸುವ ನಿರೀಕ್ಷೆಯಿದೆ. ಮೆಟ್ರೋ ಯೋಜನೆಗಾಗಿ 500 ಕೋಟಿ ರೂ.ಗಳ ಅನುದಾನವನ್ನು ಒದಗಿಸಲಾಗಿದೆ ಎಂದು ಮೆಟ್ರೋ ರೈಲು ಯೋಜನೆ ಬಗ್ಗೆ ಸದಾನಂದ ಗೌಡರು ವಿವರಿಸಿದರು.












Click it and Unblock the Notifications