ಮೋಜು ಮಸ್ತಿಗೆ ಜಿಮ್ ಗೆ ಹೋಗ್ತಿಲ್ಲ: ಸದಾನಂದ
ಇದೀಗ ತಾನೆ ದೆಹಲಿಗೆ ಬಂದಿಳಿದ ಮುಖ್ಯಮಂತ್ರಿ ಡಿವಿಎಸ್, ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಮೋಜು ಮಸ್ತಿಗೆ ಜಿಮ್ ಗೆ ಹೋಗ್ತಿಲ್ಲ. ರಾಜ್ಯಕ್ಕೆ ಆರ್ಥಿಕ ಶಕ್ತಿ ತುಂಬಲು ಜಿಮ್ ಗೆ ಹೋಗಲೇಬೇಕು. ಆದ್ದರಿಂದ ಯಾವುದೇ ಕಾರಣಕ್ಕೂ ವಿದೇಶ ಪ್ರವಾಸದಿಂದ ಹಿಂದಕ್ಕೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಇತ್ತೀಚೆಗೆ ತಾವು ಇಬ್ಬರು ಅಧಿಕಾರಿಗಳನ್ನು ತೆಗೆದು ಹಾಕಿರುವುದಕ್ಕೆ ಅನಗತ್ಯವಾಗಿ ಬಣ್ಣ ಹಚ್ಚುವುದು ಬೇಡ ಎಂದು ವಿನಂತಿಸಿದ ಸದಾನಂದ ಗೌಡ, ಮುಖ್ಯಮಂತ್ರಿ ಕಾರ್ಯಾಲಯದಿಂದಲೇ ವೆಚ್ಚ ಕಡಿತಕ್ಕೆ ಕೈಹಾಕಲಾಗಿದೆ. ಅನಗತ್ಯ ಹುದ್ದೆಗಳನ್ನು ಕಿತ್ತುಹಾಕಲಾಗುತ್ತಿದೆ ಎಂದು ಸಮಜಾಯಿಷಿ ನೀಡಿದರು.
ಇದೇ ವೇಳೆ ಕನ್ನಡ ಭವನದಲ್ಲಿ ತಮ್ಮನ್ನು ಸ್ವಾಗತಿಸಲು ಬಂದ ದೆಹಲಿ ಪ್ರತಿನಿಧಿ ಧನಂಜಯ್ ಕುಮಾರ್ ಅವರನ್ನು ಕ್ಯಾರೆ ಅನ್ನದೇ ಇರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಧನಂಜಯ್ ಕುಮಾರ್ ಯಾವುದೇ ಕ್ಷಣ ಸ್ಥಾನ ವಂಚಿತರಾಗಬಹುದು ಎಂದು ವಿಶ್ಲೇಷಿಲಾಗಿದೆ.
ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಹಾಗೂ ಅಧಿಕಾರಿಗಳ ದಂಡಿನೊಂದಿಗೆ (GIM) ಇದೇ 15 ರ ರಾತ್ರಿ ಬೆಂಗಳೂರಿನಿಂದ ಹೊರಡಲು ಸಿದ್ಧತೆ ನಡೆಸಿದ್ದಾರೆ. ಸಿಂಗಾಪುರ ಮತ್ತು ಜಪಾನ್ ಸುತ್ತಾಡಿ, ಅಲ್ಲಿನ ಬಂಡವಾಳಶಾಹಿಗಳನ್ನು ಭೇಟಿ ಮಾಡಿ ಏ. 21ಕ್ಕೆ ವಾಪಸಾಗಲಿದ್ದಾರೆ.