ಕೋಯ್ನಾ ಡ್ಯಾಂನಿಂದ ನೀರು ಬಿಡಲು ರಾಜ್ಯದ ಮನವಿ
ಉತ್ತರ ಕರ್ನಾಟಕದ ಜಿಲ್ಲೆಗಳಾದ ಬಿಜಾಪುರ, ರಾಯಚೂರು, ಬೀದರ, ಗುಲಬರ್ಗಾ, ಯಾದಗಿರಿ, ಬಾಗಲಕೋಟೆಗಳಲ್ಲಿ ಜನರಿಗೆ ಕನಿಷ್ಠ ಕುಡಿಯುವ ನೀರಿಲ್ಲ, ಜಾನುವಾರುಗಳಿಗೆ ಮೇವಿಲ್ಲ. ಈ ಬೇಸಿಗೆಯಲ್ಲಿ ಜನರು ತತ್ತರಿಸಿ ಹೋಗಿದ್ದಾರೆ. ಮೇವಿಗೆ ಹಣವಿಲ್ಲದೆ ಯಾದಗಿರಿ ಜಿಲ್ಲೆಯಲ್ಲಿ ರೈತರು ಜಾನುವಾರುಗಳನ್ನು ಆಂಧ್ರಕ್ಕೆ ಮಾರುತ್ತಿದ್ದಾರೆ.
ಈ ನಿಟ್ಟಿನಲ್ಲಿ ಜನರ ದಾಹವನ್ನು ತಣಿಸುವ ಉದ್ದೇಶದಿಂದ ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಬಸವರಾಜ್ ಬೊಮ್ಮಾಯಿ, ಮುರುಗೇಶ್ ನಿರಾಣಿ ಮುಂತಾದವರಿರುವ ನಿಯೋಗ ಚೌಹಾಣ್ ಅವರನ್ನು ಭೇಟಿ ಮಾಡಲಿದೆ. ಸಾತಾರಾ ಜಿಲ್ಲೆಯಲ್ಲಿರುವ ಕೋಯ್ನಾ ಅಣೆಕಟ್ಟೆಯಿಂದ 4 ಟಿಎಂಸಿ ನೀರನ್ನು ಬಿಡಬೇಕೆಂದು ಆಗ್ರಹಿಸುವುದಾಗಿ ಬೊಮ್ಮಾಯಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಐದು ನದಿಗಳ ಜಿಲ್ಲೆ ಎಂದು ಹೆಸರಾಗಿರುವ ಬಿಜಾಪುರದ ಭೀಮಾ ತೀರದಲ್ಲಿನ ಜನರು ನೀರಿಗಾಗಿ ಸರಕಾರದತ್ತ ನೋಡುತ್ತಿದ್ದಾರೆ. ರಾಯಚೂರು ಜಿಲ್ಲೆಯಲ್ಲಿನ ನಾರಾಯಣಪುರ ಅಣೆಕಟ್ಟು ಸಂಪೂರ್ಣ ಒಣಗಿದೆ. ಏಪ್ರಿಲ್ ತಿಂಗಳ ಮಳೆಯ ಸುಳಿವೂ ಇಲ್ಲ. ಇಂತಹ ಸಂದರ್ಭದಲ್ಲಿ ಮಹಾರಾಷ್ಟ್ರದಿಂದ ನೀರು ತರಿಸಿದರೆ ಆಕಾಶದತ್ತ ಮುಖಮಾಡಿ ಕುಳಿತಿರುವ ಜನರ ದಾಹ ತುಸುವಾದರೂ ತಣಿದೀತು.