ಅಫ್ರೀನ್ ಚೇತರಿಸಿಕೊಳ್ಳಲು ಮೂರು ವಾರ ಬೇಕು : ವೈದ್ಯರು
ಮೈತುಂಬೆಲ್ಲ ಸಿಗರೇಟಿನಿಂದ ಸುಟ್ಟ ಮತ್ತು ಕಚ್ಚಿದ ಗಾಯಗಳಾಗಿ, ಮುಖಕ್ಕೆ ಗುದ್ದಿದ್ದರಿಂದ ಕತ್ತಿನ ಮೂಳೆ ಸರಿದ ಅಫ್ರೀನ್ ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಳು. ತೀವ್ರ ನಿಗಾ ಘಟಕದಲ್ಲಿರುವ ಮಗುವಿಗೆ ಕೃತಕ ಉಸಿರಾಟದ ಸಾಧನವನ್ನು ಅಳವಡಿಸಲಾಗಿದ್ದು, ರಕ್ತ ಪೂರೈಕೆ ಮಾಡಲಾಗುತ್ತಿದೆ.
ಅಫ್ರೀನ್ಳಿಗೆ ಆಗಾಗ ದೇಹದ ಸೆಟೆತ ಉಂಟಾಗುತ್ತಿದ್ದು ಮಿದುಳಿನ ಕೋಶಗಳಿಗೆ ಹಾನಿಯುಂಟಾಗಿರಬಹುದು ಎಂದು ಅಂದಾಜಿಸಿರುವ ವೈದ್ಯರು, ಕೃತಕ ಉಸಿರಾಟದ ಸಾಧನವನ್ನು ತೆಗೆದ ನಂತರವೇ ಮಗುವಿನ ಸ್ಥಿತಿಯ ಬಗ್ಗೆ ನಿಖರವಾಗಿ ಹೇಳಲಾಗುವುದು ಎಂದಿದ್ದಾರೆ.
ಬಂಧಿತನಾಗಿರುವ ಅಫ್ರೀನ್ಳ ಅಪ್ಪ ಉಮರ್ ಫಾರೂಕ್, ಹುಟ್ಟಿದ ಮಗು ಗಂಡಾಗದಿದ್ದರಿಂದ ಕೊಲ್ಲಲು ಯತ್ನಿಸಿದೆ ಎಂದು ಪೊಲೀಸರೆದಿರು ಒಪ್ಪಿಕೊಂಡಿದ್ದಾನೆ. ಈಗ ಮಾತ್ರವಲ್ಲ ಹಿಂದೆ ಕೂಡ ಕೊಲೆಗೆ ಯತ್ನಿಸಿದ್ದೆ ಎಂದು ಆತ ಹೇಳಿದ್ದಾನೆ. ಫಾರೂಕ್ನ ಹೆಂಡತಿ ಮಗುವಿನ ತಾಯಿ ರೇಶ್ಮಾ ಬಾನು ಕೂಡ, ಆತ ಮಗುವಿನ ಮೇಲೆ ಹಲ್ಲೆ ಮಾಡಲು ಆಗಾಗ ಯತ್ನಿಸುತ್ತಲೇ ಇದ್ದ ಎಂದು ಪೊಲೀಸರಿಗೆ ದೂರು ನೀಡಿದ್ದಾಳೆ.
ಮದುವೆಯಾದ ನಂತರ ಮಗು ಗಂಡಾಗಿದ್ದರೆ ಓಕೆ, ಹೆಣ್ಣಾಗಿದ್ದರೆ 1 ಲಕ್ಷ ರು. ವರದಕ್ಷಿಣೆಯಾಗಿ ನೀಡಬೇಕು ಎಂದು ಫಾರೂಕ್ ಬೇಡಿಕೆ ಇಟ್ಟಿದ್ದ. ಹೆಣ್ಣು ಮಗು ಹುಟ್ಟಿದ ನಂತರ ಹಣ ನೀಡುವಂತೆ ಪೀಡಿಸುತ್ತಲೇ ಇದ್ದ. ಹಣ ತರಲು ರೇಶ್ಮಾ ವಿಫಲಳಾದಾಗ ಮಗುವನ್ನು ಕೊಲ್ಲಲು ಫಾರೂಕ್ ನಿರ್ಧರಿಸಿದ್ದಾನೆ. ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷೆ ನೀನಾ ನಾಯಕ್ ಫಾರೂಕ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.