ಹೌದು, ರೆಡ್ಡಿ ಅಧಿವೇಶನಕ್ಕೆ ಬರೋದು ಬೇಡ್ವಾ?

ಹಾಗಾದ್ರೆ ವಿಧಾನಪರಿಷತ್ತಿನ ಗೌರವಾನ್ವಿತ ಸದಸ್ಯರಾಗಿ ರೆಡ್ಡಿ ಕಲಾಪದಲ್ಲಿ ಪಾಲ್ಗೊಳ್ಳೋದು ಬೇಡ್ವಾ? ಎಷ್ಟು ಕಾಲ ಅಂತ ಅವರು ಅಧಿವೇಶನದಿಂದ ಗೈರು ಹಾಜರಾಗಬಹುದು? ವಿಧಾನಪರಿಷತ್ ಸಭಾಪತಿ ಡಿ ಎಚ್ ಶಂಕರಮೂರ್ತಿ, ರೆಡ್ಡಿ ಗೈರು ಹಾಜರಿ ಬಗ್ಗೆ ಏನನ್ನುತ್ತಾರೆ? ರೆಡ್ಡಿ ಮೇಲ್ಮನೆಗೆ ಬರಲಿಲ್ಲಾಂದ್ರೆ ಅವರ ಸದಸ್ಯತ್ವ ರದ್ದಾಗುತ್ತಾ? ಯಾಕೆ ರದ್ದಾಗಬಾರದು? ಎಂದು ಜನ ಕೇಳುತ್ತಿದ್ದಾರೆ.
ಇನ್ನೇನು ಒಂದೆರಡು ದಿನದಲ್ಲಿ ಬಜೆಟ್ ಅನುಮೋದನೆಯಾಗಬೇಕಿದೆ. ಮೇಲ್ಮನೆಯಲ್ಲಿ ಆಡಳಿತಾರೂಢ ಬಿಜೆಪಿ ಸಂಖ್ಯಾಬಲ ಹೊಂದಿರುವುದರಿಂದ ಬಜೆಟ್ಟಿಗೇನೂ ಚ್ಯುತಿಬಾರದು. ಆದರೆ ರಾಜಕೀಯ ಹಾವು-ಏಣಿಯಾಟದಲ್ಲಿ ರೆಡ್ಡಿ ಉಪಸ್ಥಿತಿ ಅನಿವಾರ್ಯವಾದರೆ ಏನು ಕ್ರಮ ಕೈಗೊಳ್ಳಬೇಕು?
ಸನ್ಮಾನ್ಯ ಸಭಾಪತಿ ಶಂಕರಮೂರ್ತಿಗಳು ಈ ಹಿಂದೆ ಎರಡು ಬಾರಿ ಅಧಿವೇಶನ ನಡೆದಾಗಲೂ 'ಜನಾರ್ದನ ರೆಡ್ಡಿಯವರು ಕಲಾಪದಲ್ಲಿ ಪಾಲ್ಗೊಳ್ಳಬೇಕು. ಅವರನ್ನು ಕಳಿಸಿಕೊಡಿ' ಎಂದು ಹೈದರಾಬಾದಿನ ಚಂಚಲಗೂಡ ಜೈಲು ಅಧೀಕ್ಷಕರಿಗೂ ತಿಳಿಸಿ, ರೆಡ್ಡಿಗೆ ನೋಟಿಸ್ ನೀಡಿದ್ದರು. ಆದರೆ ಅತ್ತ ಕಡೆಯಿಂದ ಏನು reply ಬಂತೋ, ರೆಡ್ಡಿ ಅಂತೂ ಬರಲಿಲ್ಲ.
ಆದರೆ ಅದೇ 'ಆರ್ಥಿಕ ಭಯೋತ್ಪಾದಕ' ಜನಾರ್ದನ ರೆಡ್ಡಿ 14321 ಸಂಖ್ಯೆ ಧರಿಸಿ, ವಿಧಾನಸೌಧದಿಂದ ಕೂಗಳೆತೆಯ ದೂರದಲ್ಲಿರುವ ಪರಪ್ಪನ ಅಗ್ರಹಾರ ಜೈಲಿನಲ್ಲಿ ದಣಿವಾರಿಸಿಕೊಳ್ಳುತ್ತಿದ್ದಾರೆ. ರೆಡ್ಡಿಯನ್ನು ಕಳಿಸಿಕೊಡಿ ಎಂದು ಸಭಾಪತಿ ಶಂಕರಮೂರ್ತಿ ಅವರು ಹೂವೀಳ್ಯ ನೀಡಿದ್ದಾರಾ!?











Click it and Unblock the Notifications