ಬೆಂಗಳೂರು ವಕ್ಫ್ ಬೋರ್ಡ್ ಭೂಕಬಳಿಕೆಗೆ sample
ಲಾಲ್ ಬಾಗ್ ಪ್ರಕರಣ ಹೀಗಿದೆ: ನಗರದ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ಕಚೇರಿ ಹೊಂದಿರುವ ವಕ್ಫ್ ಮಂಡಳಿಯ ಅಧ್ಯಕ್ಷ ಆರ್. ಅಬ್ದುಲ್ ರಿಯಾಜ್ ಖಾನ್ ಮತ್ತು ಇತರೆ ಸದಸ್ಯರು ಇದರಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ. ಹಗರಣದ ಬೆನ್ನುಹತ್ತಿದ್ದ ಸಿಐಡಿ ಪೊಲೀಸರು ಮಂಡಳಿ ಅಧ್ಯಕ್ಷ ರಿಯಾಜ್ ಖಾನ್ ಗಾಗಿ ಒಂದು ತಿಂಗಳಿನಿಂದ ಬೇಟೆಯಾಡುತ್ತಿದ್ದಾರೆ.
ಲಾಲ್ ಬಾಗ್ ಸಸ್ಯಕಾಶಿಯ ಪಕ್ಕದಲ್ಲೇ ಇರುವ 2.3 ಎಕರೆ ಪ್ರದೇಶವೇ ಈ ವಿವಾದಿತ ಭೂಮಿಯಾಗಿದೆ. ಎಚ್. ಭವಾರಿಲಾಲ್ ಎಂಬುವವರಿಗೆ ಅಧ್ಯಕ್ಷ ರಿಯಾಜ್ ಖಾನ್ 2008ರಲ್ಲೇ ಈ ಭೂಮಿಯನ್ನು ಮಾರಾಟ ಮಾಡಿದ್ದಾರೆ ಎನ್ನಲಾಗಿದೆ. ವಾಸ್ತವವಾಗಿ 2000ರಲ್ಲೇ ಹಾಪ್ ಕಾಮ್ಸ್ ಈ ಭೂಮಿ ತನ್ನದೆಂದು ಹೈಕೋರ್ಟ್ ಮೊರೆಹೋಗಿತ್ತು. ಆದರೆ ಕೋರ್ಟ್ ವಕ್ಫ್ ಮಂಡಳಿ ಪರ ತೀರ್ಪು ನೀಡಿತು.
ಈ ಮಧ್ಯೆ 2007ರಲ್ಲಿ ಭವಾರಿಲಾಲ್ ನಿಧನರಾದರು. ಆ ಸಂದರ್ಭದಲ್ಲಿ ವಕ್ಫ್ ಮಂಡಳಿ ಕೋರ್ಟಿಗೆ ಮತ್ತೊಂದು ಅರ್ಜಿ ಗುಜರಾಯಿಸಿ, ಆ ವಿವಾದಿತ ಭೂಮಿಗೂ ತನಗೂ ಈಗ ಯಾವುದೇ ಸಂಬಂಧವಿಲ್ಲ ಎಂದು ಘೋಷಿಸಿತು.
ಆಗ ಮಧ್ಯ ಪ್ರವೇಶಿಸಿದ ರಾಜ್ಯ ಸರಕಾರ ಹಿರಿಯ ಐಎಎಸ್ ಅಧಿಕಾರಿ ಸಯ್ಯದ್ ಜಮೀರ್ ಪಾಷಾ ಅವರಿಗೆ ಪ್ರಕರಣವನ್ನು ಪರಾಮರ್ಷಿಸುವಂತೆ ಸೂಚಿಸಿತು. ಜಮೀರ್ ಪಾಷಾ ಅವರ ಶಿಫಾರಸಿನಂತೆ ಸರಕಾರ 2009ರಲ್ಲಿ ಪ್ರಕರಣವನ್ನು ಸಿಐಡಿಗೆ ಒಪ್ಪಿಸಿತು. ತನಿಖೆ ನಡೆಸಿದ ಸಿಐಡಿ ವಕ್ಫ್ ಮಂಡಳಿ ಅಧ್ಯಕ್ಷ ಆರ್. ಅಬ್ದುಲ್ ರಿಯಾಜ್ ಖಾನ್ ಮತ್ತು ಇತರೆ ಸದಸ್ಯರು ಹಗರಣದಲ್ಲಿ ಶಾಮೀಲಾಗಿರುವುದು ದೃಢಪಟ್ಟಿದೆ ಎಂದು ವರದಿ ಸಲ್ಲಿಸಿತು.
ತದನಂತರ ನ್ಯಾಯಾಂಗ ತನಿಖೆ, ಮತ್ತೆ ಪೊಲೀಸ್ ತನಿಖೆ ಮತ್ತು ಕೋರ್ಟ್ ತೀರ್ಪುಗಳ ಹೊಯ್ದಾಟದಲ್ಲಿ ಪ್ರಕರಣದ ಆಮೂಲಾಗ್ರ ತನಿಖೆ ಕೈಗೆತ್ತಿಕೊಳ್ಳುವಂತೆ ಮತ್ತೆ ಸಿಐಡಿಗೆ ನೀಡಲಾಗಿದೆ. ಅಧ್ಯಕ್ಷ ರಿಯಾಜ್ ಖಾನ್ ಮತ್ತೊಂದು ವಂಚನೆಗೆ ರಿಯಾಜು ಮಾಡಿಕೊಳ್ಳುತ್ತಿದ್ದಾರೆ.