ಯಡಿಯೂರಪ್ಪ ನಿಷ್ಠ ಅರವಿಂದ ಲಿಂಬಾವಳಿಗೆ ಏನಾಗಿದೆ?
ಈಗಲೂ ಅಷ್ಟೇ ಮೊನ್ನೆ ಇದ್ದಕ್ಕಿದ್ದಂತೆ ಯಡಿಯೂರಪ್ಪ ಪರ ಬ್ಯಾಟಿಂಗ್ ಆಡುತ್ತಿದ್ದ ಲಿಂಬಾವಳಿ ಇದೀಗ ತಮ್ಮ ನಿಷ್ಠೆ ಬದಲಾಯಿಸಿದ್ದಾರೆ. ಕಾರ್ಮಿಕ ಸಚಿವ ಬಿ.ಎನ್. ಬಚ್ಚೇಗೌಡ ಸಹ ಇದೇ ಹಾದಿ ತುಳಿದಿದ್ದಾರೆ. ಹೈಕಮಾಂಡ್ ಕರೆಯದಿದ್ದರೂ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಪರವಾಗಿ ಲಾಬಿ ಮಾಡಲು ಇಬ್ಬರೂ ದೆಹಲಿಗೆ ದೌಡಾಯಿಸಿದ್ದಾರೆ.
ಶನಿವಾರವೇ ಇಬ್ಬರೂ ತಮ್ಮ ಸಮಾನಮನಸ್ಕರೊಂದಿಗೆ ದೆಹಲಿಗೆ ತೆರಳಿದ್ದು, ಇಂದು ಪಕ್ಷದ ವರಿಷ್ಠ ನಾಯಕರನ್ನು ಭೇಟಿ ಮಾಡಿ ರಾಜ್ಯ ಬಿಜೆಪಿಯಲ್ಲಿನ ಬೆಳವಣಿಗೆಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ದಾಖಲಿಸಲಿದ್ದಾರೆ ಎನ್ನಲಾಗಿದೆ.
ಲಿಂಬಾವಳಿ ಯಾವ ಬಣದಲ್ಲಿದ್ದಾರೆ ಎಂಬುದರ ಬಗ್ಗೆ ಹಲವು ಗೊಂದಲಗಳಿವೆ. ಯಡಿಯೂರಪ್ಪ ಬೆಂಬಲಿಸಿ ರೆಸಾರ್ಟ್ಗೆ ತೆರಳಿದ್ದ ಲಿಂಬಾವಳಿ ರಾಜ್ಯಸಭೆಗೆ ಬಿ.ಜೆ. ಪುಟ್ಟಸ್ವಾಮಿ ಅವರ ನಾಮಪತ್ರಕ್ಕೆ ಸೂಚಕರಾಗಿ ಸಹಿ ಹಾಕಿದ್ದರು. ಮರುದಿನ ಬಿಜೆಪಿ ರಾಜ್ಯಾಧ್ಯಕ್ಷ ಈಶ್ವರಪ್ಪ ಅವರ ನಿರ್ದೇಶನದ ಮೇರೆಗೆ ಸಹಿ ವಾಪಸ್ ಪಡೆದಿದ್ದೂ ಅಲ್ಲದೆ, ಯಡಿಯೂರಪ್ಪ ಪಾಳೆಯ ಬಿಟ್ಟು ಹೊರಬಂದರು. ರೆಸಾರ್ಟ್ ರಾಜಕಾರಣ ಸರಿಯಲ್ಲ ಎಂಬ ಹೇಳಿಕೆಯನ್ನೂ ನೀಡಿದ್ದರು.
ದೆಹಲಿಯಲ್ಲಿ ಸರಣಿ ಭೇಟಿ: ತಾಜಾ ವರದಿಗಳ ಪ್ರಕಾರ ಲಿಂಬಾವಳಿ ನೇತೃತ್ವದ ನಿಯೋಗವು ಮೊದಲು ಪಕ್ಷದ ಹಿರಿಯ ನಾಯಕ ರಾಜನಾಥ್ ಸಿಂಗ್, ನಂತರ ಮತ್ತೊಬ್ಬ ನಾಯಕ ಅಡ್ವಾಣಿ ಹಾಗೂ ಕೊನೆಯದಾಗಿ ಸುಷ್ಮಾ ಸ್ವರಾಜ್ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿದೆ. ಕರ್ನಾಟಕದಲ್ಲಿ ಮುಖ್ಯಮಂತ್ರಿ ಸದಾನಂದ ಗೌಡರನ್ನು ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಈಶ್ವರಪ್ಪನವರನ್ನು, ಅರ್ಥಾತ್ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪಗೆ ಮತ್ತೆ ಯಾವುದೇ ಪ್ರಮುಖ ಸ್ಥಾನಮಾನ ನೀಡಬಾರದು ಎಂದು ವರಿಷ್ಠರಲ್ಲಿ ಮನವಿ ಮಾಡಿಕೊಂಡಿದೆ.