ಬ್ಲಾಕ್ ಲೇಬೆಲ್, ರೇಣುಕಾಚಾರ್ಯ ಇನ್ ಟ್ರಬಲ್
ಇದರೊಂದಿಗೆ, ಯಡಿಯೂರಪ್ಪನವರನ್ನು ಬೆಂಬಲಿಸಿ ಬಿಜೆಪಿ ಶಾಸಕರು ನಡೆಸಿದ ಗೋಲ್ಡನ್ ಪಾಮ್ಸ್ ರೆಸಾರ್ಟ್ ರಾಜಕೀಯ ಹೊಸ ರಂಗು, ನಶೆಯನ್ನು ಪಡೆದಿದೆ. ಅಬಕಾರಿ ಎಸಿಯ ಕಚೇರಿಯಿಂದ ವಶಪಡಿಸಿಕೊಳ್ಳಲಾಗಿದ್ದ ಮೂರು ಬಾಟಲುಗಳನ್ನು ರೆಸಾರ್ಟಿಗೆ ಕಳಿಸಲು ಸ್ವತಃ ರೇಣುಕಾಚಾರ್ಯ ಅವರೇ ಆದೇಶಿಸಿದ್ದರು ಎಂದು ನೀಡಿರುವ ಹೇಳಿಕೆ ಅಬಕಾರಿ ಸಚಿವರನ್ನು ತೊಂದರೆಗೆ ಸಿಲುಕಿಸಿದೆ.
ಅಬಕಾರಿ ಇಲಾಖೆಯಲ್ಲಿ ಭಾರೀ ಅವ್ಯವಹಾರ ನಡೆಯುತ್ತಿದೆ ಎಂಬ ದೂರು ಬಂದಿದ್ದ ಹಿನ್ನೆಲೆಯಲ್ಲಿ ಮಾರ್ಚ್ 20ರಂದು ಅಬಕಾರಿ ಅಧಿಕಾರಿ ಮೋಹನ್ ಕುಮಾರ್ ಅವರ ಕಚೇರಿ ಮೇಲೆ ದಾಳಿ ನಡೆಸಲಾಗಿತ್ತು. ಆಗ ಅವರಿಂದ 25,200 ರು. ನಗದು ಮತ್ತು ಬ್ಲಾಕ್ ಲೇಬೆಲ್, ಜಾನಿ ವಾಕರ್ ಮುಂತಾದ ವಿದೇಶಿ ಬ್ರಾಂಡುಗಳ 24 ಬಾಟಲುಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಮೋಹನ್ ಕುಮಾರ್ ಅವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಅವರು, ಸೀಜ್ ಮಾಡಿದ್ದ ವಿದೇಶಿ ಬ್ರಾಂಡಿನ ಬಾಟಲುಗಳಲ್ಲಿ ಮೂರನ್ನು ರೆಸಾರ್ಟಿಗೆ ಕಳಿಸಲು ತಾಕೀತು ಮಾಡಿದ್ದರು ಎಂದು ಬಾಯಿಬಿಟ್ಟಿದ್ದಾರೆ. ಇದೇ ಹೇಳಿಕೆಯನ್ನು ಕಣ್ಣೀರುಗರೆಯುತ್ತಲೇ ಲೋಕಾಯುಕ್ತ ವಿಶೇಷ ನ್ಯಾಯಾಧೀಶರ ಮುಂದೆಯೂ ಶನಿವಾರ ಮೋಹನ್ ಕುಮಾರ್ ಬಾಯಿಬಿಟ್ಟಿದ್ದಾರೆ.
ಆ ವಿದೇಶಿ ಬ್ರಾಂಡಿನ ದುಬಾರಿ ಬಾಟಲಿಗಳನ್ನು ರೇಣುಕಾಚಾರ್ಯರಿಗಾಗಿ ಇಂದಿರಾನಗರದ ಮದ್ಯದಂಗಡಿಯಿಂದ ತರಿಸಲಾಗಿತ್ತು ಎಂದು ಕುಮಾರ್ ತಿಳಿಸಿದ್ದಾರೆ. ಈ ಹೇಳಿಕೆಯ ಆಧಾರದ ಮೇಲೆ, ರೇಣುಕಾಚಾರ್ಯ ಅವರ ಮೇಲೆ ದೂರು ದಾಖಲಿಸಲು ನ್ಯಾಯಾಧೀಶರು ಸೂಚಿಸಿದ್ದು, ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಆದೇಶಿಸಿದ್ದಾರೆ. ಹಿಂದೊಮ್ಮೆ ಐದು ವರ್ಷದ ಬಾಲಕನಿಗೇ ಬ್ರಾಂಡಿ ನೀಡಿ ರೇಣುಕಾಚಾರ್ಯ ವಿವಾದಕ್ಕೆ ಗುರಿಯಾಗಿದ್ದರು.