ಗಾಲಿ ರೆಡ್ಡಿ ಆರೆಸ್ಸೆಸ್ ಗೂ ಮೂಟೆಗಟ್ಟಲೆ ಕೊಟ್ಟವ್ನೆ!
ಕರ್ನಾಟಕದ ಗಣಿಧಣಿ ಜನಾರ್ದನ ರೆಡ್ಡಿ ಅವರ ಕೃಪೆಗೆ ರಾಜಕಾರಣಿಗಳು ಮತ್ತು ಅಧಿಕಾರಿಗಳು ಮಾತ್ರವಲ್ಲದೆ ಆರೆಸ್ಸೆಸ್ ಮುಖಂಡರು ಕೂಡಾ ಪಾತ್ರರಾಗಿದ್ದಾರೆ.
ಅಕ್ರಮ ಗಣಿಗಾರಿಕೆ ಹಣ ಎಲ್ಲೆಡೆ ಹೇಗೆ ವ್ಯವಸ್ಥಿತವಾಗಿ ಹರಿದಾಡಿದೆ ಎಂಬುದು ಈ ಪ್ರಕರಣದಿಂದ ತಿಳಿಯುತ್ತದೆ.
ಲಭ್ಯ ಮಾಹಿತಿ ಪ್ರಕಾರ ಜನಾರ್ದನರೆಡ್ಡಿಯಿಂದ ಆರೆಸ್ಸೆಸ್ ನೇತಾರ ಮಂಗೇಶ್ ಬೆಂಡೆ ರೆಡ್ಡಿಹಣ ಪಡೆದಿರುವುದು ತಿಳಿದುಬಂದಿದೆ. 23-5-2007ರಂದು ಮಂಗೇಶ್ ಬೆಂಡೆ ರೆಡ್ಡಿಗೆ ಬರೆದಿರುವ ಪತ್ರವೊಂದರಲ್ಲಿ, ಹಂಪಿ ವಿಶ್ವವಿದ್ಯಾಲಯದ ಇಬ್ಬರು ಅಧ್ಯಾಪಕರು ವರ್ಗಾವಣೆ ಮಾಡಿದ್ದಕ್ಕಾಗಿ ಅವರಿಗೆ ಧನ್ಯವಾದ ಅರ್ಪಿಸಲಾಗಿದೆ.
ಹುಬ್ಬಳ್ಳಿಯ ಸಂಘದ ಕಚೇರಿ ಕೇಶವ ಕುಂಜ ನಿರ್ಮಾಣಕ್ಕಾಗಿ ಆರೆಸ್ಸೆಸ್ಗೆ ಮತ್ತು ರಾಷ್ಟ್ರೋತ್ಥಾನ ವಿದ್ಯಾಲಯಕ್ಕೆ ಕೋಟಿ ಲೆಕ್ಕದಲ್ಲಿ ದೇಣಿಗೆ ನೀಡಿದ್ದಕ್ಕಾಗಿ ರೆಡ್ಡಿಗೆ ಧನ್ಯವಾದ ಸಲ್ಲಿಸಲಾಗಿದೆ.
'ನಿಮ್ಮಿಂದ ನಮಗೆ ಬಹಳಷ್ಟು ಉಪಕಾರವಾಗಿದೆ' ಎಂದು ಅಭಿನಂದನೆ ಸಲ್ಲಿಸಿದ್ದಾರೆ. ಆದರೆ, ದೇಣಿಗೆ ನಿರ್ದಿಷ್ಟ ಪ್ರಮಾಣದಲ್ಲಿ ನಮೂದಿಸಿಲ್ಲ.
ಆರೆಸ್ಸೆಸ್ ನ ನೂತನ ಕಟ್ಟಡದಲ್ಲಿ ಒಂದು ಸಭಾಂಗಣಕ್ಕೆ ನಿಮ್ಮ ತಾಯಿಯ ಹೆಸರನ್ನಿಡಲು ಇಚ್ಛಿಸಲಾಗಿದೆ. ಅವರ ಭಾವಚಿತ್ರ ಕಳುಹಿಸಿಕೊಡುವಂತೆ ರೆಡ್ಡಿಯನ್ನು ಕೋರಿಕೆ ಸಲ್ಲಿಸಿದ್ದು ಪತ್ರದಲ್ಲಿದೆ.
ಆದರೆ, ನಾಗಪುರದಲ್ಲಿರುವ ಬೆಂಡೆ ಈ ಪತ್ರವನ್ನು ನಕಲಿ ಎಂದಿದ್ದು, ಆರೆಸ್ಸೆಸ್ ಜನರಿಂದ ದೇಣಿಗೆ ಪಡೆಯುವುದು ನಿಜವಾದರೂ, ತಾವಾಗಾಲಿ, ಸಂಘವಾಗಲಿ ರೆಡ್ಡಿಯಿಂದ ಹಣ ಪಡೆದಿಲ್ಲ ಎಂದು ಹೇಳಿದ್ದಾರೆ.
ರೆಡ್ಡಿ ತಾಯಿಯ ಹೆಸರನ್ನು ಸಭಾಂಗಣಕ್ಕೆ ಇಡುವುದು ಸುಳ್ಳು. ಆದರೆ, ರಾಷ್ಟ್ರೋತ್ಥಾನ ವಿದ್ಯಾಲಯಕ್ಕೆ ರೆಡ್ಡಿ ದೇಣಿಗೆ ನೀಡಿರುವುದು ನಿಜ ಎಂದು ಬೆಂಡೆ ಒಪ್ಪಿಕೊಂಡಿದ್ದಾರೆ.