ಪರಪ್ಪನ ಅಗ್ರಹಾರದಲ್ಲಿ ಜನಾ ರೆಡ್ಡಿ ಜಗನ್ನಾಟಕ
ಹೇಳಿಕೇಳಿ ಸಿಬಿಐ ಬಂಧನದಲ್ಲಿದ್ದ ರೆಡ್ಡಿಗೆ ಮಾಧ್ಯಮದೊಂದಿಗೆ ಮಾತನಾಡಿದ್ದಕ್ಕೆ ಸಾಧ್ಯವಾಗಿದ್ದಾದರೂ ಹೇಗೆ? ಅದು ರೆಡ್ಡಿಗೆ ಅಚಾನಕ್ಕಾಗಿ, ಅನಾಯಾಸವಾಗಿ ಸಿಕ್ಕ ಸುವರ್ಣಾವಕಾಶವೇ? ಇದರಲ್ಲಿ ಸಿಬಿಐ ಅಧಿಕಾರಿಗಳ ನಿರ್ಲಕ್ಷ್ಯ ಎಷ್ಟರ ಮಟ್ಟಿಗೆ ಕೆಲಸ ಮಾಡಿದೆ? ಎಂಬ ಪ್ರಶ್ನೆಗಳು ಕುತೂಹಲ ಮೂಡಿಸಿವೆ.
ಏನಾಯಿತೆಂದರೆ ಅಸಲಿಗೆ ಮಾಧ್ಯಮಗಳ ಕಣ್ತಪ್ಪಿಸಲೆಂದೇ ರೆಡ್ಡಿಯನ್ನು ಕೋರ್ಟಿಗೆ ಕರೆದುಕೊಂಡು ಹೋಗುವಾಗ ಅಂಬಾಸಿಡರ್ ಕಾರಿನಲ್ಲೂ, ವಾಪಸಾಗುವಾಗ ಸಾಮಾನ್ಯ ಪೊಲೀಸ್ ವಾಹನದಲ್ಲೇ ಸಿಬಿಐ ಅಧಿಕಾರಿಗಳು ಕರೆದೊಯ್ದರು. ಆದರೆ ಬರುವಾಗ ಪೊರಪಾಟು ಬಿದ್ದರು. ಸಿಬಿಐ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯವೋ ಏನೋ. ಅಂತೂ ರೆಡ್ಡಿ ಅವರನ್ನು ಯಾಮಾರಿಸಿದ್ದು ಕಣ್ಣಿಗೆ ರಾಚುತ್ತಿತ್ತು. ಅಥವಾ ಬೆಂಗಳೂರು ಸಿಬಿಐ ಅಧಿಕಾರಿಗಳ ಮೇಲೆ ರೆಡ್ಡಿ ತಮ್ಮ ವಶೀಕರಣ ಬೀರುತ್ತಿದ್ದಾರಾ? ಎಂಬ ಅನುಮಾನವೂ ಹುಟ್ಟುಹಾಕಿದೆ.
ಚಾಲಕನ ಹಿಂಬದಿಯ ಸೀಟಿನಲ್ಲಿ ರೆಡ್ಡಿಯನ್ನು ಕೂರಿಸಿಕೊಂಡು ಕರೆತರಲಾಗುತ್ತಿತ್ತು. ಆಗ ಅಚಾನಕ್ಕಾಗಿ ಮಾಧ್ಯಮಗಳ ಕ್ಯಾಮರಾ ಕಂಡ ರೆಡ್ಡಿ ಅದೆಲ್ಲಿತ್ತೋ ಆ ಧೈರ್ಯ, ಸಾಹಸ ಅಥವಾ ಲಕ್ಷಣನಂತಹ ರಾಮುಲು ಮೇಲಿನ ಪ್ರೀತಿ ಅದೆಲ್ಲಿಂದ ಉಕ್ಕಿತೋ ಕಿಟಕಿಯಿಂದ ತಲೆ ಹೊರಹಾಕಿದವರೆ ಮೈಕಿನತ್ತ ಕೈ ಚಾಚಿ 'ಗರ್ಭದಲ್ಲಿ ಅಡಗಿಸಿಟ್ಟುಕೊಂಡಿದ್ದ ಭಾವನೆಯನ್ನು ಹೊರಹಾಕಿಯೇ ಬಿಟ್ಟರು!' ಆದರೆ ಅವರ ಎಡಗೈ ಏನ್ಮಾಡ್ತಿತ್ತು? ಪಕ್ಕದಲ್ಲಿ, ಮಧ್ಯಾಹ್ನದ ಮಂಪರಿನಲ್ಲಿದ್ದ ಅಧಿಕಾರಿ ಏನ್ಮಾಡಿದರು ಗೊತ್ತಾ?