ಯಡಿಯೂರಪ್ಪ ಅಭಿನಂದನಾ ಸಮಾರಂಭಕ್ಕೆ ಹುಬ್ಬಳ್ಳಿ ಸಜ್ಜು
ನೆಹರೂ ಮೈದಾನದಲ್ಲಿ ನಡೆಯಲಿರುವ ಈ ಸಮಾವೇಶದ ನೇತೃತ್ವವನ್ನು, ಇತ್ತೀಚೆಗೆ ಯಡಿಯೂರಪ್ಪನವರಿಗೆ ಮತ್ತೆ ಹತ್ತಿರವಾಗಿರುವ ಹುಬ್ಬಳ್ಳಿ ಗ್ರಾಮಾಂತರ ಶಾಸಕ ಜಗದೀಶ್ ಶೆಟ್ಟರ್ ಮತ್ತು ಯಡಿಯೂರಪ್ಪನವರ ಕಟ್ಟಾ ಬೆಂಬಲಿಗ ಶಿಗ್ಗಾಂವಿ ಶಾಸಕ ಬಸವರಾಜ್ ಬೊಮ್ಮಾಯಿ ಮತ್ತು ಲೋಕೋಪಯೋಗಿ ಸಚಿವ ಸಿಎಂ ಉದಾಸಿ ಅವರು ವಹಿಸಿಕೊಂಡಿದ್ದಾರೆ. ಜೊತೆಗೆ ಶೋಭಾ ಕರಂದ್ಲಾಜೆ, ವಿ ಸೋಮಣ್ಣ, ರೇಣುಕಾಚಾರ್ಯ, ಮುರುಗೇಶ್ ನಿರಾಣಿ ಮುಂತಾದವರು ಭಾಗವಹಿಸುವ ಸಂಭವನೀಯತೆಯಿದೆ.
ರಾಜಕೀಯ ಅಸ್ಥಿರತೆಯನ್ನು ಎದುರಿಸುತ್ತಿರುವ ಯಡಿಯೂರಪ್ಪನವರು ಈ ಸಂದರ್ಭವನ್ನು ತಮ್ಮ ಬಲ ಪ್ರದರ್ಶನ ತೋರಲು ಬಳಸಿಕೊಂಡರೂ ಆಶ್ಚರ್ಯವಿಲ್ಲ. ಈ ಜನ್ಮದಿನೋತ್ಸವದ ಸಂದರ್ಭದಲ್ಲಿ ಯಡಿಯೂರಪ್ಪನವರ ಮೂರುವರ್ಷಗಳ ಆಡಳಿತದ ಬಗ್ಗೆ ಗುಣಗಾನ ಕೂಡ ನಡೆಯಲಿದೆ ಎಂಬ ಮಾತು ಕೇಳಿಬಂದಿದೆ. ಸಮಾರಂಭದ ತಯಾರಿ ಭರದಿಂದ ಸಾಗಿದ್ದು, ರಾಜ್ಯದೆಲ್ಲೆಡೆಯಿಂದ ಲಕ್ಷಾಂತರ ಜನರು ಆಗಮಿಸುವ ನಿರೀಕ್ಷೆಯಿದೆ.
ಅಕ್ರಮ ಗಣಿಗಾರಿಕೆಯಿಂದ ತಾತ್ಕಾಲಿಕ ಸಮಾಧಾನ ಯಡಿಯೂರಪ್ಪನವರಿಗೆ ದೊರಕಿದ್ದರೂ, ಬಿಜೆಪಿ ಹೈಕಮಾಂಡ್ ಅವರ ಮೇಲೆ ಇನ್ನೂ ಒಲವು ತೋರದಿರುವುದು ಯಡಿಯೂರಪ್ಪನವರಿಗೆ ಭಾರೀ ಇರುಸುಮುರುಸು ತಂದಿದೆ. ಜೊತೆಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ನಿತೀನ್ ಗಡ್ಕರಿ ಕೂಡ ಸದಾನಂದ ಗೌಡರಿಗೆ ಅಭಯಹಸ್ತ ನೀಡಿದ್ದಾರೆ. ತೆರೆಯ ಹಿಂದಿನ ಬೆಳವಣಿಗೆ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ, ಉತ್ತಮ ಬಜೆಟ್ ಮಂಡನೆಯತ್ತ ಲಕ್ಷ್ಯ ಕೊಡಿ ಎಂದು ಗೌಡರಿಗೆ ಗಡ್ಕರಿ ಕಿವಿಮಾತು ಹೇಳಿದ್ದಾರೆ.
ಬಹಿರಂಗವಾಗಿ ಯಡಿಯೂರಪ್ಪನವರು ತಾವು ಹೈಕಮಾಂಡಿಗೆ ಏನನ್ನೂ ಕೇಳುವುದಿಲ್ಲ, ಮುಖ್ಯಮಂತ್ರಿ ಪದವಿಯನ್ನು ಬಯಸುವುದಿಲ್ಲ ಎಂದು ಹೇಳುತ್ತಿದ್ದರೂ, ತೆರೆಯಹಿಂದೆ ಅವರ ಬೆಂಬಲಿಗರು ತಮ್ಮ ಯತ್ನವನ್ನು ಬಿಟ್ಟಿಲ್ಲ. ಈ ಯತ್ನದ ಭಾಗವಾಗಿ ಕೆಲವರು ಗಡ್ಕರಿಯವರನ್ನು ಭೇಟಿ ಮಾಡಲು ಗೋವಾಗೆ ಕೂಡ ತೆರಳಿದ್ದರು.
ಮುಸುಕಿನ ಗುದ್ದಾಟ : ಮುಖ್ಯಮಂತ್ರಿ ಪಟ್ಟಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ ಮತ್ತು ಸದಾನಂದ ಗೌಡರ ನಡುವೆ ಮುಸುಕಿನ ಗುದ್ದಾಟ ನಡೆದೇ ಇದೆ. ಹುಬ್ಬಳ್ಳಿಯ ಸಮಾರಂಭಕ್ಕೆ ಆಹ್ವಾನ ನೀಡಲಾಗಿದ್ದರೂ, ಉಡುಪಿ-ಚಿಕ್ಕಮಗಳೂರು ಲೋಕಸಭೆ ಉಪಚುನಾವಣೆ ಪ್ರಚಾರ ಕಾರ್ಯವಿದ್ದು, ಸಾಧ್ಯವಾದರೆ ಮಾತ್ರ ಹುಬ್ಬಳ್ಳಿ ಸಮಾರಂಭದಲ್ಲಿ ಭಾಗವಹಿಸುವುದಾಗಿ ಸದಾನಂದ ಗೌಡ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಹೇಳಿದ್ದಾರೆ. ಅಪ್ರತ್ಯಕ್ಷವಾಗಿ ಸದಾನಂದ ಗೌಡರನ್ನು ಬೆಂಬಲಿಸುತ್ತಿರುವ ಈಶ್ವರಪ್ಪ ಕೂಡ ಇದೇ ಮಾತನ್ನು ಹೇಳಿದ್ದಾರೆ.