ಪಂಚಮಸಾಲಿಗಳ ಮುಂದೆ ಯಡ್ಡಿ ನಿವೃತ್ತಿ ಮಂತ್ರ
ಇತ್ತೀಚೆಗೆ ಹುಟ್ಟುಹಬ್ಬದ ದಿನದಂದು ಹೊಸ ಹುರುಪಿನಿಂದ ಶಕ್ತಿಯುತವಾಗಿ ಜನರ ಬಳಿಗೆ ಮತ್ತೊಮ್ಮೆ ತೆರಳುವೆ, ಹೋರಾಟ ಮಾಡುವೆ ಎಂದಿದ್ದ ಯಡಿಯೂರಪ್ಪ ಇಂದೇಕೋ ಸಪ್ಪಗಾಗಿದ್ದರು.
"ಅಧಿಕಾರ ಶಾಶ್ವತವಲ್ಲ. ಆತ್ಮಗೌರವವಿಲ್ಲದ ಮೇಲೆ, ಜನರ ಪ್ರೀತಿ ವಿಶ್ವಾಸ ಇಲ್ಲದ ಮೇಲೆ ಆ ಕ್ಷೇತ್ರದಲ್ಲಿ ಇರಬಾದು. ಸದ್ಯದ ರಾಜಕೀಯ ಪರಿಸ್ಥಿತಿ ಬೇಸರ ತರಿಸಿದೆ" ಎಂದರು.
ಒಬ್ಬರು ಮಾನಸಿಕ ಅಸ್ವಸ್ಥ ಎನ್ನುತ್ತಾರೆ.. ಇನ್ನೊಬ್ಬರು ಪಂಚಮಸಾಲಿ, ಲಿಂಗಾಯತನೇ ಅಲ್ಲ ಎನ್ನುತ್ತಾರೆ. ಈ ರೀತಿ ಹೇಳಿಕೆಗಳು ಮನಸನ್ನು ಘಾಸಿಗೊಳಿಸಿದೆ ಎಂದು ಯಡಿಯೂರಪ್ಪ ನೊಂದು ನುಡಿದರು.
ರಾಜಕೀಯ ನಿವೃತ್ತಿಯ ಬಗ್ಗೆ ಯೋಚಿಸುತ್ತಿದ್ದೇನೆ. ಸುಮ್ಮನೆ ಇಲ್ಲಿ ಇದ್ದು ಗುದ್ದಾಡುವುದಕ್ಕಿಂತ ನೆಮ್ಮದಿ ಬದುಕು ಬಾಳುವುದು ಲೇಸು ಎನಿಸುತ್ತಿದೆ. ನನಗೆ ಅಧಿಕಾರ ಸಿಕ್ಕಿದ್ದಾಗ ಜನರಿಗೆ ಬೇಕಾದ ಸವಲತ್ತು ನೀಡಿದ್ದೇನೆ ಎಂಬ ತೃಪ್ತಿ ಇದೆ ಎಂದು ಬಿಎಸ್ ವೈ ಹೇಳಿದರು.
ಸಮಾವೇಶದಲ್ಲಿದ್ದವರಿಗೆ ಒಂದು ಕ್ಷಣ ಯಡಿಯೂರಪ್ಪ ಅವರ ಮಾತುಗಳನ್ನು ಅರಗಿಸಿಕೊಳ್ಳಲು ಆಗಲಿಲ್ಲ. ಎಲ್ಲೋ ಮಠಾಧೀಶರ ಭಾಷಣ ಪ್ರತಿ ಯಡಿಯೂರಪ್ಪ ಅವರ ಕೈ ಸೇರಿರಬೇಕು ಎಂದು ಹಲವು ಜನರು ಅಂದುಕೊಂಡರು.
ಆದರೆ, ಯಡಿಯೂರಪ್ಪ ನಿಜಕ್ಕೂ ಬದಲಾಗಿದ್ದಾರಾ? ಅಥವಾ ಇದು ಸಿಂಪತಿ ರಾಜಕೀಯ ತಂತ್ರವಾ? ಪಂಚಮಸಾಲಿಗೆ ಯಡ್ಡಿ ಹೇಳಿದ ನೀತಿ ಪಾಠವಾ? ಎಂಬ ಪ್ರಶ್ನೆಗಳಿಗೆ ಯಡಿಯೂರಪ್ಪ ಅವರೇ ಉತ್ತರಿಸಬೇಕು.