ತಿರುಪತಿಗೆ ಮಂಗಳೂರಿನಿಂದ ನೇರ ರೈಲು
ಪ್ರತಿ ಶನಿವಾರ ರಾತ್ರಿ 10.45ಕ್ಕೆ ಮಂಗಳೂರು ಜಂಕ್ಷನ್ನಿಂದ ಸಾತ್ರಾಗಾಚ್ ವಿವೇಕ್ ರೈಲು ಹೊರಡಲಿದೆ. ಕಾಸರಗೋಡು, ಕಾಂಞಂಗಾಡ್, ಕಣ್ಣೂರು, ಕಲ್ಲಿಕೋಟೆ ಶೋರ್ನೂರು ಜಂಕ್ಷನ್, ಪಾಲಕ್ಕಾಡ್, ಕೊಯಮತ್ತೂರು ಜಂಕ್ಷನ್, ತಿರುಪುರ, ಈರೋಡ್, ಸೇಲಮ್, ಕಾಟ್ಪಾಡಿ ಜಂಕ್ಷನ್, ಚಿತ್ತೂರು ಮಾರ್ಗವಾಗಿ ಭಾನುವಾರ ಮಧ್ಯಾಹ್ನ 2.35ಕ್ಕೆ ತಿರುಪತಿ ತಲುಪಲಿದೆ.
ತಿರುಪತಿಯ ಅನಂತರ ಈ ರೈಲು ಗುಡೂರ್ ಜಂಕ್ಷನ್, ನೆಲ್ಲೂರು, ಓಂಗೋಲ್, ವಿಜಯವಾಡ, ರಾಜಮಂಡ್ರಿ, ವಿಶಾಖಪಟ್ಟಣ, ಶ್ರೀಕಾಕುಳಂ, ಬ್ರಹ್ಮಪುರ, ಭುವನೇಶ್ವರ, ಕಟಕ್, ಬಿಲಾಸ್ಪುರ ಸಮೀಪದ ಸಾತ್ರಾಗಾಚ್ ಜಂಕ್ಷನ್ಗೆ ಸೋಮವಾರ ಸಂಜೆ ತಲುಪಲಿದೆ. ಮಂಗಳೂರಿನಿಂದ ಹೊರಟ ರೈಲು ಕೇರಳ, ತಮಿಳುನಾಡು ಗಡಿ, ಆಂಧ್ರಪ್ರದೇಶ, ಒರಿಸ್ಸಾ, ಮಧ್ಯಪ್ರದೇಶದವರೆಗೆ ಹೋಗಲಿದೆ.
ಸಾತ್ರಾಗಾಚ್ ಜಂಕ್ಷನ್ನಿಂದ ಗುರುವಾರ ಸಂಜೆ 4.05ಕ್ಕೆ ಹೊರಡುವ ರೈಲು ಇದೇ ಮಾರ್ಗವಾಗಿ ತಿರುಪತಿಗೆ ಬರುವಾಗ ಶುಕ್ರವಾರ ಸಂಜೆ 5.10 ಗಂಟೆ ಆಗುತ್ತದೆ. ಶನಿವಾರ ಬೆಳಗ್ಗೆ 9.45ಕ್ಕೆ ರೈಲು ಮಂಗಳೂರು ಸೆಂಟ್ರಲ್ಗೆ ತಲುಪುತ್ತದೆ.
'ಇದೇ ಮೊದಲ ಬಾರಿಗೆ ತಿರುಪತಿಗೆ ಮಂಗಳೂರಿನಿಂದ ರೈಲು ಪ್ರಯಾಣ ಆರಂಭಗೊಂಡಿದೆ. ತಿರುಪತಿಗೆ ಹೋದ ಬಳಿಕ ಆಸುಪಾಸಿನ ಕ್ಷೇತ್ರಗಳನ್ನು ಸಂದರ್ಶಿಸಿ ಅದೇ ರೈಲಿನಲ್ಲಿ ಹಿಂದಿರುಗಬಹುದು. ಉಡುಪಿ, ಉ.ಕ.ದ ಪ್ರಯಾಣಿಕರು ಗೋವಾ ರೈಲು ಮೂಲಕ ಮಂಗಳೂರಿಗೆ ತಲುಪಬಹುದು' ಎಂದು ರೈಲ್ವೆ ಯಾತ್ರೀ ಸಂಘದ ಅಧ್ಯಕ್ಷ ಆರ್.ಎಲ್. ಡಾಯಸ್ ತಿಳಿಸಿದ್ದಾರೆ.