ವರಿಷ್ಠರ ಸಭೆಗೆ ಹೋಗದಿರಲು ಕಾರಣವಾಗಿದ್ದೇನು?
ದಿಲ್ಲಿ ಸಭೆಗೆ ಬರೋಲ್ಲ ಎಂದಿರುವ ಯಡಿಯೂರಪ್ಪ, ಅದಕ್ಕೆ ವರಿಷ್ಟರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದುನೊಡಲು ನಿರ್ಧರಿಸಿದ್ದಾರೆ. ಒಂದು ವೇಳೆ ತಮಗೆ ಪೂರಕವಾಗಿ ವರಿಷ್ಠರು ನಡೆದುಕೊಂಡರೆ ಚುನಾವಣೆ ಪ್ರಚಾರಕ್ಕೆ ಹೋಗೋದು, ಇಲ್ಲಾಂದ್ರೆ ಆ ಕಡೆ ತಲೆಯಿಟ್ಟೂ ಮಲಗುವುದು ಬೇಡ ಎಂಬುದು ಅವರ ಸದ್ಯದ ಎಣಿಕೆಯಾಗಿದೆ.
ಕುತೂಹಲದ ಸಂಗತಿಯೆಂದರೆ ಕೋರ್ ಕಮಿಟಿಗೆ ಸಭೆಯಲ್ಲಿ ಪಾಲ್ಗೊಳ್ಳಬೇಕು. ಅಲ್ಲಿ ಏನಾದರೂ ಮಾಡಿ ಸಿಎಂ ಪೋಸ್ಟೋ ಅಥವಾ ರಾಜ್ಯಾಧ್ಯಕ್ಷ ಪದವಿಯನ್ನೋ ಗುಂಜಿಕೊಂಡು ಬರೋಣ ಎಂದೇ ಯಡಿಯೂರಪ್ಪ ಮಂಡಿಗೆ ತಿನ್ನುತ್ತಿದ್ದರು. ಆದರೆ ತಮ್ಮ ಪರಮವೈರಿ ಅನಂತ್ ಕುಮಾರ್ ನಿನ್ನೆ ಉಡುಪಿಯಲ್ಲಿ ಕೊಟ್ಟ ಏಟಿನಿಂದ ಯಡಿಯೂರಪ್ಪಗೆ ಚೇತರಿಸಿಕೊಳ್ಳಲಾಗಲಿಲ್ಲ.
ಯಾವಾಗ ಅನಂತ್, ಸದಾನಂದ ಮತ್ತು ಈಶ್ವರಪ್ಪ ನೇತೃತ್ವದಲ್ಲೇ ಚುನಾವಣೆ ಎದುರಿಸುತ್ತೇವೆ. ಯಡಿಯೂರಪ್ಪ ಈ ಕಡೆ ಬರೋದೇ ಬೇಡ ಅಂದ್ರೋ, ಯಡಿಯೂರಪ್ಪ ನಿಜಕ್ಕೂ ಧರಾಶಾಹಿಯಾಗಿದ್ದಾರೆ. ನಿಂತ ನೆಲ ಅರೆ ಕ್ಷಣ ಬಾಯ್ತೆರೆದಂತೆ ಆಗಿದೆ. ಆಗ್ಲೇ ಅವರಲ್ಲಿ ಕೋರ್ ಕಮಿಟಿ ಸಭೆಗೆ ಬಹಿಷ್ಕಾರ ಹಾಕುವ ಆಲೋಚನೆ ಮೊಳಕೆಯೊಡೆದಿರುವುದು.
ಮೊನ್ನೆ ರಾಮಿ ಗೆಸ್ಟ್ ಲೈನ್ ರೆಸಾರ್ಟಿನಲ್ಲಿ ಗಡ್ಕರಿ ತಮ್ಮನ್ನು ಗದರಿಕೊಂಡಿದ್ದಕ್ಕೂ ಇದೇ ಅನಂತನೇ ಕಾರಣ ಎಂಬುದು ಯಡಿಯೂರಪ್ಪಗೆ ಚೆನ್ನಾಗಿ ಮನವರಿಕೆಯಾಗಿದೆ. ಈಗ ಮತ್ತೆ ಉಡುಪಿಯಲ್ಲೂ ಟಾಂಗ್ ಕೊಡುತ್ತಿದ್ದಾನೆ. ಇವರಿಗೆ ನನ್ನ ತಾಕತ್ತು ತೋರಿಸಲೇಬೇಕು ಎಂದು ಗರಂ ಆಗಿರುವ ಯಡಿಯೂರಪ್ಪ ಇದೀಗ ನೀವೂ ಬೇಡ, ನಿಮ್ಮ ಸಭೆಯೂ ಬೇಡ, ಚುನಾವಣೆಯೂ ಬೇಡ ಎಂಬ ನಿರ್ಧಾರಕ್ಕೆ ಬಂದಂತಿದೆ.