ಮಂಗ್ಳೂರು: ಗೇಟು ಲೇಟಾಗಿ ತೆಗೆದಿದ್ದಕ್ಕೆ ಸಾಯ್ಸೇಬಿಟ್ರು
ಈ ಅಮಾನವೀಯ ಘಟನೆ ನಡೆದಿರುವುದು ಮಂಗಳೂರಿನಲ್ಲಿ ನಿನ್ನೆ ರಾತ್ರಿ 10.30ರ ವೇಳೆಯಲ್ಲಿ. ಸಾವಿಗೀಡಾದ ದುರ್ದೈವಿ ಹುಬ್ಬಳ್ಳಿ ಕೆಲಸಗಾರ ಗಣೇಶ. ನಗರದ ಬಂಟ್ಸ್ ಹಾಸ್ಟೆಲಿನ ಎದುರಿರುವ ಎಸ್ಸೆಲ್ ಟವರ್ಸ್ ಆಫೀಸ್ ಕಾಂಪ್ಲೆಕ್ಸ್ ನಲ್ಲಿ ಗಣೇಶ ಎಂಬ ಮಧ್ಯವಯಸ್ಕ ರಾತ್ರಿ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದ.
ಪಾತಕ ತಂಡ ಎಸ್ಸೆಲ್ ಟವರ್ಸ್ ನೊಳಕ್ಕೆ ರಾತ್ರಿ ಧಾವಂತದಲ್ಲಿ ಬರಲು ಯತ್ನಿಸಿತು. ಆದರೆ ಅದೇಕೋ ಗಣೇಶ ಗೇಟನ್ನು ತೆಗೆಯುವುದಕ್ಕೆ ಸ್ವಲ್ಪ ವಿಳಂಬ ಮಾಡಿದೆ. ಅಷ್ಟೇ ಅವನು ಮಾಡಿದ ಮಹಾಪರಾಧ. ಇದರಿಂದ ಸಿಟ್ಟಿಗೆದ್ದ ಯುವಕರ ತಂಡ ಒಂಚೂರೂ ಕರುಣೆ ತೋರದೆ ಕಾವಲಯಗಾರನನ್ನು ಹಿಗ್ಗಾಮುಗ್ಗ ಥಳಿಸಿದ್ದಾರೆ. ಗಣೇಶ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.
ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ನಾಲ್ವರು ಪರಾರಿಯಾಗಿದ್ದಾರೆ. ಪಾತಕಿಗಳ ಹೆಸರು, ವಿಳಾಸ ಇನ್ನೂ ತಿಳಿದುಬಂದಿಲ್ಲ. ಇತ್ತ ಸಂಸಾರಕ್ಕೆ ಆಧಾರವಾಗಿದ್ದ ಗಣೇಶನ ಸಾವಿನಿಂದ ಆತನ ಹೆಂಡತಿ ಮತ್ತು ಇಬ್ಬರ ಮಕ್ಕಳ ಆಕ್ರಂದನ ಮುಗಿಲುಮುಟ್ಟಿದೆ.