ಸದಾನಂದಗೌಡರೇ ಮುಖ್ಯಮಂತ್ರಿ: ನಿತಿನ್ ಗಡ್ಕರಿ
ಅಲ್ಲಿಗೆ ತಾವು ಮುಖ್ಯಮಂತ್ರಿಯಾಗಬೇಕು ಎಂಬ ಯಡಿಯೂರಪ್ಪ ಮೊಂಡಾಟಕ್ಕೆ ಗಡ್ಕರಿ ಸೊಪ್ಪು ಹಾಕಿಲ್ಲ. ಇದರೊಂದಿಗೆ ಸದ್ಯಕ್ಕೆ ಯಡಿಯೂರಪ್ಪಗೆ ಕಹಿಯಾದ ಬರ್ತ್ ಡೆ ಗಿಫ್ಟ್ (1943 ಫೆ. 27) ಸಂದಾಯವಾಗಿದೆ ಎನ್ನಬಹುದು.
ನಿತಿನ್ ಗಡ್ಕರಿ ಅವರು ಇಂದು ಬೆಳಗ್ಗೆ ಹೋಟೆಲ್ ಅಶೋಕಾದಲ್ಲಿ ಸುಮಾರು 1 ಗಂಟೆ ಕಾಲ ಯಡಿಯೂರಪ್ಪ ಜತೆ ಮಾತುಕತೆ ನಡೆಸಿದರು. ಈ ವೇಳೆ ಸಿಎಂ ಸದಾನಂದಗೌಡ, ಸಂಸದ ಅನಂತಕುಮಾರ್, ಈಶ್ವರಪ್ಪ ಮುಂತಾದ ನಾಯಕರು ಉಪಸ್ಥಿತರಿದ್ದರು.
ಯಡಿಯೂರಪ್ಪ ಅವರ ಬೇಡಿಕೆಗೆ ತಣ್ಣೀರೆರಚಿದ ಗಡ್ಕರಿ ಹೈಕಮಾಂಡ್ ಇದೀಗ ಹೊಸೂರು ರಸ್ತೆಯಲ್ಲಿರುವ ರಾಮಿ ಗೆಸ್ಟ್ ಲೈನ್ ರೆಸಾರ್ಟ್ ತಲುಪಿಕೊಂಡಿದ್ದಾರೆ. ಅಲ್ಲಿ ಸುಮಾರು 1 ಗಂಟೆ ಕಾಲ ತುರ್ತು ಚಿಂತನ ಮಂಥನ ಸಭೆ ನಡೆಯಲಿದೆ. ಗಡ್ಕರಿ ಇಂದು ಮಧ್ಯಾಹ್ನ 12.30 ಗಂಟೆಗೆ ದೆಹಲಿ ವಿಮಾನ ಹತ್ತಬೇಕಾಗಿದೆ. ಆದ್ದರಿಂದ 2 ದಿನಗಳ ಸಭೆಯನ್ನು 2 ಗಂಟೆ ಅವಧಿಗೆ ಮೊಟಕುಗೊಳಿಸಲಾಗಿದೆ. ಈ ಮಧ್ಯೆ, ಯಡಿಯೂರಪ್ಪ ತಮ್ಮ ಬೆಂಬಲಿಗರೊಂದಿಗೆ ಸಭೆಯಲ್ಲಿ ಪಾಲ್ಗೊಳ್ಳಲು ಗೆಸ್ಟ್ ಲೈನ್ ರೆಸಾರ್ಟ್ ತಲುಪಿಕೊಂಡಿದ್ದಾರೆ.
ಈ ಮಧ್ಯೆ, ಮಹತ್ವದ ಸ್ಥಾನಮಾನ ಬಯಸಿ ಯಡಿಯೂರಪ್ಪ ಅವರು ನೀಡಿರುವ ಫೆ. 27ರ ಡೆಡ್ ಲೈನ್ ಏನಾಗುವುದೋ ಎಂಬ ಕುತೂಹಲ ಮೂಡಿದೆ.