ಸುವರ್ಣ ನ್ಯೂಸ್ ಚಾನಲಿನಲ್ಲೂ 3 ಬಣ: ಕೆಎಸ್ ಈಶ್ವರಪ್ಪ
ಏನಾಯಿತೆಂದರೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ನೋರು ಇನ್ನೇನು ಕೆಲವೇ ನಿಮಿಷಗಳಲ್ಲಿ ತಮ್ಮ ಪಟಾಲಂಗೆ ಊಟ ಹಾಕಲು ಸೌಟು ಹಿಡ್ಕೊಂಡು ನಿಂತಿದ್ದಾರೆ. ಈ ಮಧ್ಯೆ, ಔಪಚಾರಿಕವಾಗಿ ಯಡಿಯೂರಪ್ನೋರ ಮನೆಗೆ ಬಂದಿದ್ದ ಈಶ್ವರಪ್ನೋರು ಮಾಧ್ಯಮದ ಜತೆ ಮಾತನಾಡಿದರು.
ಮಾಧ್ಯಮಗಳು ಅಂದರೆ ಅವರಿಗೆ ಶ್ಯಾನೆ ಪ್ರೀತಿ. ಸದಾ ಮಾಧ್ಯಮ ಮಿತ್ರರ ಮೇಲೆ ಗೂಬೆ ಕೂರಿಸುವುದು, ಕಾಗೆ ಹಾರಿಸುವುದು ಈಶ್ವರಪ್ನೋರಿಗೆ ಬಲು ಪ್ರೀತಿ. ಆದರೆ ಇದನ್ನು ಗಂಟುಮುಖವಿಟ್ಟುಕೊಂಡೇ ಮಾಡುತ್ತಾರೆ. ತಮ್ಮ ತಪ್ಪುಗಳನ್ನು, ಅನಾಚಾರಗಳನ್ನು ಮುಚ್ಚಿಕೊಳ್ಳಲು ಎದುರಿಗೆ ಸಿಕ್ಕ ವರದಿಗಾರರ ಮೇಲೆ ಮುಕ್ಕಣ್ಣನಂತೆ ಮೂರನೇ ಕಣ್ಣು ಬಿಡುವುದನ್ನು ವ್ರತದಂತೆ ಆಚರಿಸಿಕೊಂಡು ಬಂದಿದ್ದಾರೆ.
ಗುರುವಾರವೂ ಹೀಗೆ ಆಯಿತು. ಇಡೀ ನಾಡು ಯಡಿಯೂರಪ್ನೋರತ್ತ ಕೇಂದ್ರೀಕೃತವಾಗಿರುವ ಈ ಘಳಿಗೆಯಲ್ಲಿ ಈಶ್ವರಪ್ನೋರು ಸಿಕ್ಕರೆ ಬಿಡ್ತಾರಾ ಮಾಧ್ಯಮದ ಮಂದಿ. ಸರಿ ಅವರನ್ನು ಸುತ್ತುವರಿದರು. ಅವರೂ ಎಂದಿನ ಗಂಟುಮುಖದೊಂದಿಗೆ ಮಾತಿಗೆ ಸಜ್ಜಾದರು. ಆದರೆ ಅವರ ಕಣ್ಣಿಗೆ ಇದ್ದಕ್ಕಿದ್ದಂತೆ suvarna news 24/7 ಹೆಸರು ಲಗತ್ತಿಸಿಕೊಂಡಿದ್ದ ಮೂರು mikeಗಳು ಕಣ್ಣಿಗೆ ಬಿದ್ದಿವೆ.
ಅದನ್ನು ಕಂಡಿದ್ದೇ ತಡ. ಒಂದೇ ಚಾನಲ್ಲಿನ ಮೂರು ಮೈಕುಗಳಿಗೆ ಇಲ್ಲೇನು ಕೆಲಸ ಎಂದು ಅದೇ ಚಾನಲ್ಲಿನ ವರದಿಗಾರನನ್ನು ತರಾಟೆಗೆ ತೆಗೆದುಕೊಳ್ಳಲು ಮುಂದಾದರು. ಆದರೆ ಅದೇನನ್ನಿಸಿತೋ ಅವರಿಗೆ ಅಥವಾ ಅದೆಲ್ಲಿತ್ತೋ ನಮ್ ಈಶ್ವರಪ್ನೋರಲ್ಲಿ ಆ ಪಾಟಿ ಹಾಸ್ಯ ಪ್ರಜ್ಞೆ... ವರದಿಗಾರ ವೀರೇಂದ್ರನನ್ನು ಕೇಳಿಯೇ ಬಿಟ್ಟರು - 'ಏನು ವೀರೇಂದ್ರ, ಸುವರ್ಣ ನ್ಯೂಸ್ ಚಾನಲಿನಲ್ಲೂ 3 ಬಣಗಳಿವೆಯಾ?' ಎಂದು ಕೇಳುತ್ತಾ ತಮ್ಮ ಜೋಕಿಗೆ ತಾವೇ ನಗೆಯಾಡಿದರು.
ಇತ್ತ, ಇತ್ತೀಚಿನ ದಿನಗಳಲ್ಲಿ ಉತ್ತಮ ರಾಜಕೀಯ ವರದಿಗಾರನಾಗಿ ರೂಪುಗುಳ್ಳುತ್ತಿರುವ ವೀರೇಂದ್ರ ಉಪ್ಪುಂದ ಮಾತ್ರ 'ನಮ್ಮದು ಹಾಗಿರಲಿ. ಮೊದಲು ನಿಮ್ಮ ಕಥೆ ಏನು ಹೇಳಿ' ಎಂದು ಕೆಎಸ್ ಈಶ್ವರಪ್ಪನವರ ಮೇಲೆ ಎಂದಿನಂತೆ ಮುರುಕೊಂಡು ಬಿದ್ದರು! ಅಂದಹಾಗೆ, ರಾಜಕಾರಣಿಗಳು ಊಸರವಳ್ಳಿಗಳಂತೆ ಕ್ಷಣಕ್ಷಣಕ್ಕೂ ಮಾತು ಬದಲಿಸುವುದನ್ನು ಸಾಧ್ಯವಾದಷ್ಟೂ ದಾಖಲೆಯ ಸಮೇತ ಅವರ ಮುಖಕ್ಕೆ ಹಿಡಿಯುವ ಸಲುವಾಗಿ ಒಂದಲ್ಲ, ಎರಡಲ್ಲ ಮೂರು ಮೈಕುಗಳನ್ನು ಹಿಡಿಯುತ್ತೇವೆ. (to be on safer side) ಒಂದು ಕೈಕೊಟ್ಟರೆ ಮತ್ತೊಂದರಲ್ಲಿ ದಾಖಲಾಗಲಿ ಎಂಬ ಸದುದ್ದೇಶದಿಂದ ಎನ್ನುತ್ತಾರೆ ವೀರೇಂದ್ರ.
ಒಟ್ಟಾರೆ ಹೇಳುವುದೇನೆಂದರೆ, ನಮ್ಮ ಈಗಿನ ರಾಜಕಾರಣಿಗಳಿಗೆ ವಿನೋದ ಪ್ರಜ್ಞೆಯೆಂಬುದೇ ಇಲ್ಲ. ಒಂಚೂರು ತಮಾಷೆ, ಒಂದು ಚಾಟೂಕ್ತಿ, ಕಡೆಯ ಪಕ್ಷ ಲವಲವಿಕೆ ಬೀರುವ ಒಂದು ಜೋಕ್..ಏನಿಲ್ಲ ಏನಿಲ್ಲ. ಸದಾ ಯಾರ ಕಾಲು ಎಳೆಯಲಿ, ಯಾರನ್ನು ದಿಗಂಬರಮಾಡಲಿ ಎನ್ನುವುದನ್ನೇ ಜಪಿಸುವ ಈ ಶ್ವೇತಾಂಬರರಿಗೆ ಜೀವನ ಸ್ವಾರಸ್ಯವನ್ನು ಸವಿಯುವ ಮನೋಧರ್ಮವೇ ಇಲ್ಲದಂತಾಗಿದೆ. So sad.