ಮಸೂದೆಯಲ್ಲಿ ತಿದ್ದುಪಡಿ:ಗೋಹತ್ಯೆ ಬೇಡ,ಎಮ್ಮೆ ಹತ್ಯೆ ಓಕೆ
ರಾಷ್ಟ್ರಪತಿಗಳ ಸಲಹೆಯ ಮೇರೆಗೆ ಮುಂದಿನ ಬಜೆಟ್ ಅಧಿವೇಶನದಲ್ಲಿ ಗೋಹತ್ಯೆ ನಿಷೇಧ ತಿದ್ದುಪಡಿ ವಿಧೇಯಕವನ್ನು ಮಂಡಿಸಲಾಗುವುದು ಎಂದು ಸಿಎಂ ಸದಾನಂದ ಗೌಡ ತುಮಕೂರಿನಲ್ಲಿ ಹೇಳಿಕೆ ನೀಡಿದ್ದಾರೆ. ಗೋಹತ್ಯೆ ನಿಷೇಧ ವಿಧೇಯಕ ರಾಷ್ಟ್ರಪತಿಗಳಿಂದ ರಾಜ್ಯಕ್ಕೆ ವಾಪಾಸ್ ಬಂದಿರುವುದು ನಿಜ. ಅವರ ಸಲಹೆ ಮೇರೆಗೆ ವಿಧೇಯಕದಲ್ಲಿ ತಿದ್ದುಪಡಿ ತಂದು ಈ ಬಜೆಟ್ ಅಧಿವೇಶನದಲ್ಲೇ ಮಂಡಿಸಲಾಗುವುದು ಎಂದು ಸಿಎಂ ಸ್ಪಷ್ಟ ಪಡಿಸಿದ್ದಾರೆ.
ಕರ್ನಾಟಕ ವಿಧಾನಮಂಡಲದಲ್ಲಿ ಅಂಗೀಕಾರ ಗೊಂಡಿರುವ ಗೋಹತ್ಯೆ ನಿಷೇಧ ವಿಧೇಯಕದಲ್ಲಿ ಎಮ್ಮೆ ಸೇರ್ಪಡೆಯಾಗಿದೆ. ಆದರೆ ಈ ವಿಧೇಯಕದಲ್ಲಿ ಉಲ್ಲೇಖವಾಗಿರುವ ಎಮ್ಮೆಯನ್ನು ಹೊರತುಪಡಿಸಿ ಈ ವಿಧೇಯಕ ತಿದ್ದುಪಡಿಯಾದರೆ ಒಳ್ಳೆಯದು ಎಂದು ಸಲಹೆ ನೀಡಿದ್ದೇವೆ ಎಂದು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಹೇಳಿದ್ದಾರೆ.
ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಈ ವಿಧೇಯಕವನ್ನು ಶಾಸನ ಸಭೆಯಲ್ಲಿ ಮಂಡಿಸಿದಾಗ ವಿಧೇಯಕದ ಪರವಾಗಿ ಕಾಂಗ್ರೆಸ್ ನ ಕೆಲ ಸದಸ್ಯರೂ ಸ್ವಾಗತಿಸಿದ್ದರು. ಹಿಂದೂಗಳಿಗೆ ಗೋಮಾತೆಯಾಗಿರುವ ಹಸುಗಳನ್ನು ಕೊಲ್ಲುವುದು ಪರಮಪಾಪ. ಹಸುಗಳನ್ನು ಕಾಪಾಡಲು ನಮ್ಮ ಸರಕಾರ ಬದ್ದವಾಗಿದೆ ಎಂದು ಮುಖ್ಯಮಂತ್ರಿ ಈ ಸಂದರ್ಭದಲ್ಲಿ ಹೇಳಿಕೆ ನೀಡಿದ್ದಾರೆ.