ಭ್ರಷ್ಟಾಚಾರ ವಿರೋಧಿ ಅಣ್ಣಾ ಹಾದಿಯಲ್ಲಿ ಯಡಿಯೂರಪ್ಪ!
ಯಡಿಯೂರಪ್ಪ ಅವರು ನಗರದ ಹೊರವಲಯದಲ್ಲಿ ಜಿಗಣಿ ಬಳಿ ಇರುವ ವಿವೇಕಾನಂದ ಆರ್ಯುವೇದ ನ್ಯಾಚುರೋಪತಿ ಕೇಂದ್ರದಲ್ಲಿ ನೈಸರ್ಗಿಕ ಚಿಕಿತ್ಸೆ ಪಡೆಯುತ್ತಿದ್ದಾರೆ. ಯಡಿಯೂರಪ್ಪ ಅವರು ಸಾಮಾನ್ಯವಾಗಿ ಜಿಂದಾಲ್ನಲ್ಲಿ ಚಿಕಿತಗ್ಸೆ ಪಡೆಯುತ್ತಿದ್ದರಾದರೂ ಇದೀಗ ಅಲ್ಲಿ ಅಣ್ಣಾ ಹಜಾರೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದ್ದರಿಂದ ಅವರಿಗೆ ವಿಮುಖ ದಿಕ್ಕಿನಲ್ಲಿ ಜಿಗಣಿ ಬಳಿಯ ಕೇಂದ್ರಕ್ಕೆ ದಾಖಲಾಗಿದ್ದಾರೆ.
ಮೂರು ದಿನಗಳ ಕಾಲ ಅಲ್ಲಿ ಯಡಿಯೂರಪ್ಪ ಚಿಕಿತ್ಸೆ ಪಡೆಯಲಿದ್ದು ತಮ್ಮ ಆಪ್ತ ಬೆಂಬಲಿಗ ಶಾಸಕ-ಸಚಿವರಿಗೆ ಹೊರತುಪಡಿಸಿ ಬೇರೆಯವರನ್ನು ಭೇಟಿಯಾಗದಿರಲು ನಿರ್ಧರಿಸಿದ್ದಾರೆ. ತಮ್ಮ ಪರಮಾತ್ಮರಾಗಿದ್ದ ಮೂವರು ಶಾಸಕರು ಬ್ಲೂ ಫಿಲಂ ವೀಕ್ಷಣೆಯಿಂದಾಗಿ ರಾಜೀನಾಮೆ ನೀಡಿದ ಪ್ರಕರಣ, ಅಕ್ರಮ ಗಣಿಗಾರಿಕೆಯಲ್ಲಿ ತಮ್ಮ ಪಾತ್ರದ ಕುರಿತು ಸುಪ್ರೀಂಕೋರ್ಟ್ ಸಿಬಿಐ ತನಿಖೆ ಅಗತ್ಯವೇ ಎಂದು ಪರಿಶೀಲಿಸಲು ಸಿಇಸಿಗೆ ಸೂಚಿಸಿರುವುದರಿಂದ ಮಾನಸಿಕವಾಗಿ ಬಳಲಿರುವ ಯಡಿಯೂರಪ್ಪ ಅವರು ನೈಸರ್ಗಿಕ ಚಿಕಿತ್ಸೆಗೆ ಮೊರೆ ಹೋಗಿದ್ದಾರೆ ಎಂದು ಹೇಳಲಾಗಿದೆ.
ಸದಾನಂದ ಗೌಡರು ಬೌರಿಂಗ್ ಆಸ್ಪತ್ರೆಗೆ: ಈ ಮಧ್ಯೆ, ಶೀತಜ್ವರದಿಂದ ಬಳಲುತ್ತಿದ್ದ ಮುಖ್ಯಮಂತ್ರಿ ಡಿವಿ ಸದಾನಂದಗೌಡರು ನಗರದ ಬೌರಿಂಗ್ ಆಸ್ಪತ್ರೆಯಲ್ಲಿ ಶುಕ್ರವಾರ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಸದಾನಂದಗೌಡರ ತಪಾಸಣೆ ನಡೆಸಿದ ವೈದ್ಯರು ಮುಖ್ಯಮಂತ್ರಿಗೆ ಎರಡು ದಿನ ವಿಶ್ರಾಂತಿ ಪಡೆಯುವಂತೆ ಸಲಹೆ ನೀಡಿದ್ದಾರೆ. ಹೀಗಾಗಿ, ಶನಿವಾರ ಮತ್ತು ಭಾನುವಾರ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸದೆ ನಿವಾಸದಲ್ಲೇ ವಿಶ್ರಾಂತಿ ಪಡೆಯಲು ಮುಖ್ಯಮಂತ್ರಿ ನಿರ್ಧರಿಸಿದ್ದಾರೆ.