ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮುಖ್ಯಮಂತ್ರಿ ಪ್ರಮಾಣವಚನಕ್ಕೆ ಸಿದ್ಧರಾಗಿ: ಮತದಾರರಿಗೆ ಪ್ರಧಾನಿ ಮೋದಿ ಕರೆ
ಕೋಲ್ಕತ್ತಾ: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಕಾವು ಏರುತ್ತಿರುವ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ರಾಜ್ಯದ ಜನತೆಗೆ ಅತ್ಯಂತ ಆಪ್ತವಾದ ಪತ್ರವೊಂದನ್ನು ಬರೆದಿದ್ದಾರೆ. ತಮ್ಮ ಚುನಾವಣಾ ಪ್ರಚಾರದ ಅನುಭವಗಳನ್ನು ಹಂಚಿಕೊಂಡಿರುವ ಅವರು, ಇದು ಕೇವಲ ರಾಜಕೀಯ ಪ್ರವಾಸವಾಗಿರದೆ ತಮಗೆ ಒಂದು ಆಧ್ಯಾತ್ಮಿಕ ಪಯಣವಾಗಿತ್ತು ಎಂದು ತಿಳಿಸಿದ್ದಾರೆ.
ಪ್ರತಿ ಕುಟುಂಬಕ್ಕೂ ತಲುಪಿದ ಸಂದೇಶ
"ಬಂಗಾಳದ ನನ್ನ ಪ್ರಿಯ ಸಹೋದರ ಸಹೋದರಿಯರೇ" ಎಂದು ಪತ್ರ ಆರಂಭಿಸಿರುವ ಮೋದಿ, ಪ್ರಜಾಪ್ರಭುತ್ವದ ಈ ಪವಿತ್ರ ಹಬ್ಬದಲ್ಲಿ ಭಾಗವಹಿಸಲು ತಮಗೆ ಹೆಮ್ಮೆ ಎನಿಸುತ್ತಿದೆ ಎಂದಿದ್ದಾರೆ. ಈ ಪತ್ರದ ಮೂಲಕ ರಾಜ್ಯದ ಪ್ರತಿ ಕುಟುಂಬದ ಜೊತೆಗೆ ತಮ್ಮ ಭಾವನೆಗಳನ್ನು ಹಂಚಿಕೊಳ್ಳುತ್ತಿರುವುದಾಗಿ ಅವರು ಹೇಳಿದ್ದಾರೆ. ಚುನಾವಣಾ ಪ್ರಚಾರದ ಹಂತದಲ್ಲಿ ಬಿಜೆಪಿಯ ಅಭಿವೃದ್ಧಿಯ ನೀಲಿನಕ್ಷೆಯನ್ನು ಜನರ ಮುಂದಿಟ್ಟ ತೃಪ್ತಿ ತಮಗಿದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಪ್ರಚಾರದ ವೇಳೆ ಅನುಭವಕ್ಕೆ ಬಂದ ವಿಶೇಷ ಶಕ್ತಿಯ ಬಗ್ಗೆ ವಿವರಿಸಿರುವ ಪ್ರಧಾನಿ, "ಬಿಸಿಲು ಮತ್ತು ಸತತ ರ್ಯಾಲಿಗಳ ನಡುವೆಯೂ ನನಗೆ ದಣಿವು ಎನಿಸಲಿಲ್ಲ. ಈ ಪ್ರಚಾರದ ಹಾದಿ ನನಗೆ ತೀರ್ಥಯಾತ್ರೆಯಂತೆ ಭಾಸವಾಯಿತು. ಮಾ ಕಾಳಿಯ ಭಕ್ತರ ನಡುವೆ ಹೋದಾಗಲೆಲ್ಲಾ, ಸಾಕ್ಷಾತ್ ಆ ತಾಯಿಯೇ ನನ್ನಲ್ಲಿ ಹೊಸ ಚೈತನ್ಯ ತುಂಬುತ್ತಿದ್ದಾಳೆ ಎನಿಸುತ್ತಿತ್ತು" ಎಂದು ಬರೆದಿದ್ದಾರೆ. ಜನವರಿ 2024ರಲ್ಲಿ ಅಯೋಧ್ಯೆಯ ರಾಮಮಂದಿರ ಪ್ರಾಣಪ್ರತಿಷ್ಠೆಯ ಸಂದರ್ಭದಲ್ಲಿ ತಮಗೆ ಯಾವ ರೀತಿಯ ಆಧ್ಯಾತ್ಮಿಕ ಅನುಭೂತಿ ಆಗಿತ್ತೋ, ಅದೇ ರೀತಿಯ ಅನುಭವ ಈಗ ಬಂಗಾಳದ ಪ್ರಚಾರದಲ್ಲೂ ಆಗಿದೆ ಎಂದು ಅವರು ಹೋಲಿಸಿದ್ದಾರೆ.
ಜನರ ಪ್ರೀತಿಯೇ ನನ್ನ ದೊಡ್ಡ ಆಸ್ತಿ
ರ್ಯಾಲಿ ಮತ್ತು ರೋಡ್ ಶೋಗಳ ವೇಳೆ ಜನರು ನೀಡಿದ ಸಂದೇಶಗಳು, ಪತ್ರಗಳು ಮತ್ತು ಭಾವಚಿತ್ರಗಳ ಬಗ್ಗೆ ಮೋದಿ ಮೆಲುಕು ಹಾಕಿದ್ದಾರೆ. ರಾತ್ರಿಯ ವೇಳೆ ಬಿಡುವಾದಾಗ ನೀವು ನೀಡಿದ ಪ್ರತಿಯೊಂದು ಪತ್ರವನ್ನೂ ನಾನು ಓದುತ್ತೇನೆ, ಚಿತ್ರಗಳನ್ನು ಗಮನಿಸುತ್ತೇನೆ. ಯುವಕರು, ಮಹಿಳೆಯರು ಮತ್ತು ಹಿರಿಯರು ತೋರಿದ ಈ ಅಪಾರ ಪ್ರೀತಿಯೇ ನನ್ನ ಜೀವನದ ಅತ್ಯಮೂಲ್ಯ ಸಂಪತ್ತು ಎಂದು ಅವರು ಭಾವುಕರಾಗಿ ನುಡಿದಿದ್ದಾರೆ. ರಾಜಕೀಯ ಸಮರದ ನಡುವೆಯೂ ಬಂಗಾಳದ ಜನರೊಂದಿಗೆ ತಮಗಿರುವ ಭಾವನಾತ್ಮಕ ಸಂಬಂಧವನ್ನು ಈ ಪತ್ರದ ಮೂಲಕ ಪ್ರಧಾನಿ ಮೋದಿ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
पश्चिम बंगाल के पूरे चुनाव अभियान के दौरान मुझे अपने परिवारजनों का जो अपार स्नेह और आशीर्वाद मिला है, उसने एक नई ऊर्जा से भर दिया है। यहां की युवाशक्ति हो या नारीशक्ति, हमारे किसान भाई-बहन हों, श्रमिक या फिर कारोबारी, सभी ‘विकसित बंगाल’ के लिए संकल्पित हैं। मैंने इस पत्र में उनके… pic.twitter.com/IKH447nWn2
— Narendra Modi (@narendramodi) April 27, 2026
ಪಶ್ಚಿಮ ಬಂಗಾಳದ ಎರಡನೇ ಹಾಗೂ ಅಂತಿಮ ಹಂತದ ಮತದಾನ ಏಪ್ರಿಲ್ 29ರಂದು ನಡೆಯಲಿದೆ. ಈ ಸಂದರ್ಭದಲ್ಲಿ ಬಂಗಾಳದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಹೊರಬಂದು ಮತ ಚಲಾಯಿಸುವ ಮೂಲಕ ಹೊಸ ದಾಖಲೆ ನಿರ್ಮಿಸಬೇಕು ಎಂದು ಪ್ರಧಾನಿ ಮೋದಿ ಮನವಿ ಮಾಡಿದ್ದಾರೆ. ಪ್ರಜಾಪ್ರಭುತ್ವದ ಹಬ್ಬದಲ್ಲಿ ಬಿಜೆಪಿಯ ವಿಜಯ ಪತಾಕೆಯನ್ನು ಹಾರಿಸಲು ಇದು ಸುವರ್ಣ ಅವಕಾಶ ಎಂದು ಅವರು ಬಣ್ಣಿಸಿದ್ದಾರೆ.
ತಮ್ಮ ಸಂದೇಶದಲ್ಲಿ ಮೋದಿ ಅವರು ಬಂಗಾಳದ ಯುವಶಕ್ತಿ, ಮಹಿಳಾ ಶಕ್ತಿ, ರೈತರು ಮತ್ತು ಕಾರ್ಮಿಕರ ಮೇಲೆ ಅಚಲ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬಿಜೆಪಿಯ ಗೆಲುವು ಕೇವಲ ಒಂದು ರಾಜಕೀಯ ಬದಲಾವಣೆಯಲ್ಲ, ಅದು ಬಂಗಾಳದ ಅಭಿವೃದ್ಧಿಯ ನವಯುಗದ ಆರಂಭ ಎಂದು ಅವರು ಪ್ರತಿಪಾದಿಸಿದ್ದಾರೆ. ಬಂಗಾಳದ ಜನರು ಭ್ರಷ್ಟಾಚಾರ ಮತ್ತು ಅರಾಜಕತೆಯ ವಿರುದ್ಧ ಮತ ಚಲಾಯಿಸಿ ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತಾರೆ ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ.












Click it and Unblock the Notifications