ಮೈಸೂರು ಬಳಿಯ ಬಲಮುರಿಯಲ್ಲಿ ಈಜುವುದು ನಿಷೇಧ
ಮೈಸೂರಿನಿಂದ 15 ಕಿ.ಮೀ. ಮತ್ತು ರಂಗನತಿಟ್ಟು ಪಕ್ಷಿಧಾಮದಿಂದ 11 ಕಿ.ಮೀ. ದೂರದಲ್ಲಿರುವ ಬಲಮುರಿ ಜಲಪಾತ ಪ್ರವಾಸಿಗರ ಅತ್ಯಂತ ನೆಚ್ಚಿನ ತಾಣ ಎನ್ನುವುದರಲ್ಲಿ ಎರಡು ಮಾತಿಲ್ಲ. ಬುತ್ತಿ ಕಟ್ಟಿಕೊಂಡು ಹೋಗಿ, ಕಾವೇರಿ ನದಿಯಲ್ಲಿ ಸ್ನಾನ ಮಾಡಿ, ದಡದಲ್ಲಿ ಕುಳಿತು ಊಟ ಮಾಡುವುದು ನಿಜಕ್ಕೂ ಅದ್ಭುತ.
ಆದರೆ, ಅಪಾಯವನ್ನು ನಿರ್ಲಕ್ಷಿಸುವ, ಹುಡುಗಾಟದ ಹುಡುಗರೇನಕರು ಈ ತಾಣದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. 'ಅಪಾಯ' ಎಂಬ ಬೋರ್ಡ್ ತಗುಲಿಸಿದ್ದರೂ, ನೀರಾಟದ ಸಾಹಸಕ್ಕಿಳಿಯುವ ಯುವಕರು ಕಾವೇರಿ ಪಾಲಾಗಿದ್ದಾರೆ. ಈ ಕಾರಣದಿಂದ ತಾತ್ಕಾಲಿಕವಾಗಿ ಈಜುವುದನ್ನು ನಿಷೇಧಿಸಲಾಗಿದೆ ಎಂದು ಪೊಲೀಸ್ ಸುಪರಿಂಟೆಂಡೆಂಟ್ ಕೌಶಲೇಂದ್ರ ಕುಮಾರ್ ತಿಳಿಸಿದ್ದಾರೆ.
ಅದ್ಭತ ಈಜುವ ತಾಣ ಎಂದು ಬಣ್ಣಿಸಲಾಗಿದ್ದರೂ, ಅಪಾಯವೂ ಅಡಗಿದೆ ಎಂಬುದನ್ನು ಅನೇಕರು ನಿರ್ಲಕ್ಷಿಸುತ್ತಾರೆ. ಈ ಕಾರಣದಿಂದಾಗಿ ಹಿನ್ನೀರಿಗೆ ಬೇಲಿಯನ್ನು ಹಾಕಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು. ಹಾಗೆಯೆ, ಕುಡಿದು ಗಲಾಟೆ ಮಾಡುವವರ ಮೇಲೂ ಒಂದು ಕಣ್ಣಿಡಲಾಗುವುದು ಎಂದು ಕುಮಾರ್ ತಿಳಿಸಿದರು. ಕಳೆದೆರಡು ವರ್ಷಗಳಲ್ಲಿ 29 ಜನರು ಇಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಇದೇ ವರ್ಷ, ಜನವರಿಯಲ್ಲಿ ಇಬ್ಬರು ಅಸುನೀಗಿದ್ದಾರೆ.