ಆರೆಸ್ಸೆಸ್ ಹಿಂದೂ ಸಂಗಮಕ್ಕೆ ಯಡಿಯೂರಪ್ಪ ಚಕ್ಕರ್

ಪ್ರಮುಖ ಕಾರ್ಯಕ್ರಮಕ್ಕೆ ಚಕ್ಕರ್ ಹಾಕುವ ಮೂಲಕ ಸದಾನಂದ ಗೌಡರ ಸರ್ಕಾರ ಹಾಗೂ ಆರೆಸ್ಸೆಸ್ ವಿರುದ್ಧ ತಮ್ಮ ಕೋಪವನ್ನು ಬಹಿರಂಗವಾಗಿ ತೋರಿಸಿದ್ದಾರೆ.
ಉತ್ತರ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯ ಬೃಹತ್ ಸಮ್ಮೇಳನ ನಡೆಯುತ್ತಿದ್ದು, ಹಾವೇರಿಯಿಂದ ಬೀದರ್, ಬೆಳಗಾವಿಯವರೆಗೆ 13 ಜಿಲ್ಲೆಗಳ 45 ಸಾವಿರಕ್ಕೂ ಹೆಚ್ಚು ಸ್ವಯಂ ಸೇವಕರು ಮೂರು ದಿನಗಳ ಸಮಾವೇಶದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಕರ್ನಾಟಕ ಪ್ರವಾಸದಲ್ಲಿ ನಿರತರಾಗಿರುವ ಯಡಿಯೂರಪ್ಪ ಅವರು ಹಿಂದೂ ಶಕ್ತಿ ಸಂಗಮಕ್ಕೆ ಗೈರು ಹಾಜರಾಗುತ್ತಾರೆ ಎಂಬ ಕಲ್ಪನೆ ಬಿಜೆಪಿ ಹಿರಿಯ ನಾಯಕರಿಗೂ ಕೂಡಾ ಇರಲಿಲ್ಲ ಎಂದು ಅವರ ಮಾತುಗಳಿಂದ ಸ್ಪಷ್ಟವಾಗಿದೆ.
ಶನಿವಾರ ನಡೆಯುವ ಬೃಹತ್ ಪಥ ಸಂಚಲನದಲ್ಲಾದರೂ ಯಡಿಯೂರಪ್ಪ ಭಾಗವಹಿಸುತ್ತಾರೆ ಎಂದು ಹುಬ್ಬಳ್ಳಿಯ ಸ್ಥಳೀಯ ಸ್ವಯಂ ಸೇವಕರು ನಂಬಿದ್ದಾರೆ. ಆರೆಸ್ಸೆಸ್ ಪ್ರಮುಖರ ಜೊತೆ ನಡೆಯುವ ಬೈಠಕ್ ನಲ್ಲಿ ಸದಾನಂದ ಗೌಡರು ರಾಜಕೀಯ ಚರ್ಚೆ ನಡೆಸುವ ಸುವರ್ಣ ಅವಕಾಶವನ್ನು ತಪ್ಪಿಸಿಕೊಳ್ಳುವುದಿಲ್ಲ ಎನ್ನಲಾಗಿದೆ.
ಶುಕ್ರವಾರ ಬೆಳಗ್ಗೆ 11 ರ ವೇಳೆಗೆ ಸಂಘದ ಕಾರ್ಯವಾಹ ಸುರೇಶ್ ಜಿ ಜೋಶಿ ಹಾಗೂ ಮೂರುಸಾವಿರ ಮಠದ ಶ್ರೀಗುರುಸಿದ್ಧರಾಜಯೋಗೀಂದ್ರ ಸ್ವಾಮಿಗಳು ಸಾನಿದ್ಧ್ಯದಲ್ಲಿ ಬೃಹತ್ ಹಿಂದೂ ಸಮಾವೇಶಕ್ಕೆ ಚಾಲನೆ ನೀಡಲಾಯಿತು. ಆರೆಸ್ಸೆಸ್ ಪ್ರಮುಖರಾದ ಮೋಹನ್ ಭಾಗವತ್, ಕೃ ಸೂರ್ಯನಾರಾಯಣರಾವ್, ಹರಿಭಾವು ವಜೆ, ಖಗೇಶನ್, ಮಂಗೇಶ್ ಬೇಂಡೆ ಮುಂತಾದವರು ಉಪಸ್ಥಿತರಿದ್ದರು.
ಸದಾನಂದ ಗೌಡರ ಸಂಪುಟದ ಸುರೇಶ್ ಕುಮಾರ್, ಜಗದೀಶ್ ಶೆಟ್ಟರ್ ಸೇರಿದಂತೆ ಹಿರಿಯ ನಾಯಕರು ಭಾಗವಹಿಸಿದ್ದರು. ಯಡಿಯೂರಪ್ಪ ಅವರ ನಡೆ ಮಾತ್ರ ನಿಗೂಢವಾಗಿದ್ದು, ಕಾರ್ಯಕರ್ತರಿಗೂ ಗೊಂದಲ ಮೂಡಿಸಿದೆ.












Click it and Unblock the Notifications