ಬೀದಿಗಿಳಿದರೆ ವಕೀಲರ ಬಂಧನ ಗ್ಯಾರಂಟಿ: ಬಿದರಿ ನಗಾರಿ
ಬೆಂಗಳೂರು ವಕೀಲರು ಗುರುವಾರ ಬೆಳಗ್ಗೆ 11 ಗಂಟೆ ವೇಳೆಗೆ ಸಿಟಿ ಸಿವಿಲ್ ಕೋರ್ಟಿನಿಂದ ರಾಜಭವನವರೆಗೂ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದ್ದಾರೆ. ಆದರೆ ಇದಕ್ಕೆ ಅನುಮತಿ ನೀಡಿಲ್ಲ. ಆದಾಗ್ಯೂ ವಕೀಲರು ರಸ್ತೆಗಿಳಿದು ಪ್ರತಿಭಟನೆ ನಡೆಸಿದರೆ ಕರ್ನಾಟಕ ಪೊಲೀಸ್ ಕಾಯಿದೆ ಸೆಕ್ಷನ್ 71ರ ಅನುಸಾರ ಮುಂಜಾಗ್ರತಾ ಕ್ರಮವಾಗಿ ಬಂಧಿಸಿ, ಕಾಡುಗೋಡಿಯಲ್ಲಿರುವ ಬಯಲು ಬಂಧೀಖಾನೆಗೆ ಕಳುಹಿಸಿತಕ್ಕದ್ದು ಎಂದು ಆದೇಶ ನೀಡಿದ್ದಾರೆ.
ಈ ಮಧ್ಯೆ ರಾಜಧಾನಿಯನ್ನು ಹೈಜಾಕ್ ಮಾಡಿದ್ದ ವಕೀಲರ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಸಮಜಾಘಾತುಕ ಶಕ್ತಿಗಳು ಈ ಪರಿಸ್ಥಿತಿಯ ದುರ್ಲಾಭ ಪಡೆಯುವ ಸಾಧ್ಯತೆ ಇದೆ. ಆದ್ದರಿಂದ ಸಂಬಂಧಪಟ್ಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎಲ್ಲ ಪೊಲೀಸರು ಕರ್ತವ್ಯಕ್ಕೆ ಸಜ್ಜಾಗಿರುವುದುರ ಜತೆಗೆ ಒಂದು ಕೆಎಸ್ಆರ್ ಪಿ ಬಸ್ಸನ್ನು ಸಿದಗ್ಧವಾಗಿಟ್ಟುಕೊಳ್ಳಬೇಕು ಎಂದು ಬಿದರಿ ಸೂಚಿಸಿದ್ದಾರೆ.
ಎಲ್ಲೆಲ್ಲಿ ಪ್ರತಿಭಟನೆ, ನಿಷೇದಾಜ್ಞೆ: ನಗರದ ಹಲಸೂರು ಗೇಟ್, ಅಶೋಕನಗರ, ಕಬ್ಬನ್ ಪಾರ್ಕ್, ವಿಧಾನಸೌಧ, ಹೈಗ್ರೌಂಡ್ಸ್, ಉಪ್ಪಾರಪೇಟೆ, ವಿಧಾನಸೌಧ ಸುತ್ತಮುತ್ತ 2 ಕಿ.ಮೀ ವ್ಯಾಪ್ತಿಯಲ್ಲಿ 2 ದಿನಗಳ ಕಾಲ ನಿಷೇದಾಜ್ಞೆ ಜಾರಿಗೆಗೊಳಿಸಿ ನಗರ ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ ಆದೇಶ ಹೊರಡಿಸಿದ್ದಾರೆ.