ಸಿಬಿಐ ಕೋರ್ಟಿನಲ್ಲಿ ಗೋಳಾಡಿದ ಜನಾರ್ದನ ರೆಡ್ಡಿ
ಪ್ರಕರಣದ ಸಂಬಂಧ ವಿಚಾರಣಾಧೀನ ಕೈದಿಯಾಗಿ ಸೆ.5ರಂದು ಹೈದರಾಬಾದಿನ ಚಂಚಲಗೂಡ ಜೈಲು ಸೇರಿಕೊಂಡ ಜನಾರ್ದನ ರೆಡ್ಡಿ ಅಂದಿನಿಂದಲೂ ವಿಡಿಯೋ ಕಾನ್ಫರೆನ್ಸ್ ಮೂಲಕ ಜೈಲಿನಿಂದಲೇ ವಿಚಾರಣೆಗೆ ಒಳಗಾಗುತ್ತಿದ್ದರು. ಆದರೆ ನಿನ್ನೆ, ವಿಶೇಷ ಬಂದೋಬಸ್ತಿನಲ್ಲಿ ಬೆಳಗ್ಗೆ 11 ಗಂಟೆಗೆ ಕೋರ್ಟ್ ಕಟೆಕಟೆಗೆ ಬಂದಿದ್ದರು.
ಕೋರ್ಟಿನೊಳಕ್ಕೆ ಬರುವವರೆಗೂ ಸಾವಧಾನವಾಗಿಯೇ ಇದ್ದ ರೆಡ್ಡಿ, ವಿಚಾರಣೆ ತೀವ್ರವಾಗುತ್ತಿದ್ದಂತೆ ಭಾವಾವೇಶಕ್ಕೊಳಗಾದರು. ಹಿಂದಿನ ದಿನವಷ್ಟೇ ಜಾಮೀನು ಲಭಿಸದೆ ಜೈಲಿನಲ್ಲೇ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುವಂತಾಗಿದ್ದು ರೆಡ್ಡಿ ಅವರನ್ನು ತೀವ್ರವಾಗಿ ಭಾದಿಸಿದಂತಿತ್ತು. ರೆಡ್ಡಿಗೆ 'ಹೇಗಾದರೂ ಮಾಡಿ ಜೈಲಿನಿಂದ ಪಾರಾದರೆ ಸಾಕಪ್ಪಾ' ಎನಿಸಿದ್ದು ವಿಚಾರಣೆ ನಡೆಯುತ್ತಿದ್ದಾಗಲೇ 'ನನಗೆ ಜಾಮೀನು ನೀಡಿ' ಎಂದೂ ನ್ಯಾಯಾಧೀಶರನ್ನು ಪರಿಪರಿಯಾಗಿ ಬೇಡಿಕೊಂಡರು.
ಹಾಗಂತ ಅವರೇನೂ ಜಾಮೀನು ಅರ್ಜಿ ಸಲ್ಲಿಸಿರಲಲ್ಲ. ಆದರೂ 'ಜಾಮೀನು ನೀಡಿ' ಎಂದು ಬಾಯಿ ಮಾತಿನಲ್ಲೇ ಜಡ್ಜ್ ಗೆ ಮೊರೆಯಿಟ್ಟರು. 'ನಾನು ಕೆಟ್ಟ ಚಾರಿತ್ರ್ಯದ ವ್ಯಕ್ತಿಯಲ್ಲ. ಸಭ್ಯನೇ. ದೇಶ ಬಿಟ್ಟು ಓಡಿಹೋಗಲ್ಲ. ಕೋರ್ಟ್ ಕಾನೂನು ಪ್ರಕಾರವೇ ನಡೆದುಕೊಳ್ಳುತ್ತೇನೆ. ಆದ್ದರಿಂದ ದಯವಿಟ್ಟು ನನ್ನನ್ನು ಬಿಟ್ಟುಬಿಡಿ' ಎಂದು ಒಂದೇ ಸಮನೆ ನ್ಯಾಯಾಧೀಶರತ್ತ ನೋಡುತ್ತಾ ಅಲವತ್ತುಕೊಂಡರು.
ಮುಂದ...!? ಸರಿ ಮಂದೇನಾಯಿತು? ಜಡ್ಜ್ ಏನಾದರೂ ಕರಗಿ ನೀರಾದರಾ? ರೆಡ್ಡಿಗೆ ಜಾಮೀನು ನೀಡಿಯೇ ಬಿಟ್ಟರಾ? ಎಂಬ ಪ್ರಶ್ನೆಗಳಿಗೆಲ್ಲ ಉತ್ತರವಾಗಿ ನ್ಯಾಯಾಧೀಶರು 'ಹಂಗೆಲ್ಲ ಬೇಲ್ ಕೊಡೋಕೆ ಬರೊಲ್ಲ. ಹೈಕೋರ್ಟಿನಲ್ಲಿ ನಿಮ್ಮ ಜಾಮೀನು ಅರ್ಜಿ ವಿಚಾರಣೆ ನಡೆದಿದೆ' ಎಂದು ಸಾರುತ್ತಾ ಜ. 25 ರವರೆಗೆ ರೆಡ್ಡಿ ನ್ಯಾಯಾಂಗ ಬಂಧನದ ಅವಧಿಯನ್ನು ಮುಂದೂಡಿದರು.
ಇದೇ ವೇಳೆ ಪ್ರಕರಣದ ಸಂಬಂಧ ಸಿಬಿಐ ಸಲ್ಲಿಸಿರುವ ಆರೋಪಪಟ್ಟಿಯನ್ನು ಮೂವರು ಆರೋಪಿಗಳಿಗೆ (ಗಾಲಿ ಜನಾರ್ದನ ರೆಡ್ಡಿ, ಬಿವಿ ಶ್ರೀನಿವಾಸ ರೆಡ್ಡಿ ಮತ್ತು ವಿಡಿ ರಾಜಗೋಪಾಲ್. ಮತ್ತೊಬ್ಬ ವಿಚಾರಾಧೀನ ಕೈದಿ ಶ್ರೀಲಕ್ಷ್ಮಿ ಜೈಲಿನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೊಳಗಾದರು) ಕೋರ್ಟ್ ವಿತರಿಸಿತು.