ಹಿರಿಯ ಪತ್ರಕರ್ತ ಕೋಟೆ ನಾಗಭೂಷಣ್ ವಿಧಿವಶ
ಮಂಗಳವಾರ ಅವರನ್ನು ಜಯದೇವ ಹೃದ್ರೋಗ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ನಾಗಭೂಷಣ್ ಅವರು ಇಂದು ತೀರಿಕೊಂಡಿದ್ದಾರೆ. ಮೃತರು ತಾಯಿ, ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.
ತಮಕೂರು ಜಿಲ್ಲೆಯಲ್ಲಿ ನಾಟಕಮನೆ, ಬೀಜ ಆಂದೋಲನ ಸೇರಿದಂತೆ ವಿವಿಧ ಸಂಘಟನೆಗಳಲ್ಲಿ ಸಕ್ರಿಯವಾಗಿ ನಾಗಭೂಷಣ್ ಅವರು ಪಾಲ್ಗೊಂಡಿದ್ದರು. ಮಾನವ ಹಕ್ಕುಗಳು ಹಾಗೂ ಮಾಹಿತಿ ಹಕ್ಕು ಕಾಯ್ದೆ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಶಾಲಾ ಕಾಲೇಜುಗಳಲ್ಲಿ ಪ್ರಚಾರಾಂದೋಲನ ನಡೆಸಿದ್ದರು.
ಅಕ್ರಮ ಗಣಿಗಾರಿಕೆ ವಿರುದ್ಧ ಸಮರ ಸಾರಿರುವ ಸಾಮಾಜಿಕ ಪರಿವರ್ತನಾ ಸಂಸ್ಥೆ ಜೊತೆ ನಾಗಭೂಷಣ್ ಗುರುತಿಸಿಕೊಂಡಿದ್ದರು. ಸಿನಿಮಾ ಮತ್ತು ಸಾಹಿತ್ಯದಲ್ಲೂ ಅಭಿರುಚಿ ಇದ್ದ ನಾಗಭೂಷಣ್ ಅವರು ಸಂವಾದ.ಕಾಂನ ಹಿರಿಯ ಸದಸ್ಯರಾಗಿ ಹಲವು ಸಿನಿಮಾ ಆಧಾರಿತ ಸಂವಾದಗಳಲ್ಲಿ ಪಾಲ್ಗೊಂಡಿದ್ದರು.
ತಮಕೂರು ವಾರ್ತೆ, ತುಮಕೂರು ಟೈಮ್ಸ್, ಜನವಾಹಿನಿ, ಪ್ರಜಾಪ್ರಗತಿ ಸೇರಿದಂತೆ ವಿವಿಧ ಪತ್ರಿಕೆಗಳಲ್ಲಿ ದುಡಿದಿದ್ದರು. ಜನಾಧಿಕಾರ ಎಂಬ ಪತ್ರಿಕೆಯನ್ನು ನಡೆಸುತ್ತಿದ್ದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಮೃತರ ಆತ್ಮಕ್ಕೆ ಶಾಂತಿ ಕೋರಿ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.