ಪತ್ತೇದಾರಿ ಪುರುಷೋತ್ತಮ ಎನ್ ನರಸಿಂಹಯ್ಯ ಕಣ್ಮರೆ

ಬಾಲ್ಯದ ಕಷ್ಟ ಕೊನೆವರೆಗೂ ಕಾಡಿತ್ತು: 1925 ಸೆ.18 ರಂದು ಬೆಂಗಳೂರಿನಲ್ಲಿ ಜನಿಸಿದ ಎನ್ ನರಸಿಂಹಯ್ಯ ಅವರು ನಾಲ್ಕನೆಯ ತರಗತಿಯಲ್ಲಿ ಓದುತ್ತಿರುವಾಗಲೆ ಇವರ ತಂದೆ ತೀರಿಕೊಂಡರು. ಸರಿಯಾದ ನೆಲೆ, ಆರ್ಥಿಕ ಸಹಕಾರ ಸಿಗದ ಕಾರಣ ವಿದ್ಯಾಭ್ಯಾಸಕ್ಕೆ ಮಂಗಳ ಹಾಡಿ ತಮ್ಮ ತಾಯಿಯ ತವರೂರಾದ ಚಿಕ್ಕಮಗಳೂರಿಗೆ ತೆರಳಿದರು.
13ನೇ ವರ್ಷದಲ್ಲಿ ಎನ್.ನರಸಿಂಹಯ್ಯನವರು ಹೊಟ್ಟೆಪಾಡಿಗಾಗಿ ಸಿಂಪಿಗ ವೃತ್ತಿ ಆಯ್ದುಕೊಂಡರು. ನಂತರ ಬಸ್ ಕ್ಲೀನರ್, ಬಸ್ ಕಂಡಕ್ಟರ್ ಆಗಿದ್ದರು. 1947ರಲ್ಲಿ ನಾಗರತ್ನಮ್ಮನವರ ಜೊತೆ ಇವರ ಮದುವೆಯಾಯಿತು.
ಚಿಕ್ಕಮಗಳೂರು ಬಿಟ್ಟು ಬೆಂಗಳೂರಿಗೆ ಬಂದು ಲಾರಿ ಸರ್ವೀಸ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡರು. ಓದಿನ ಹವ್ಯಾಸ ಬೆಳೆಸಿಕೊಂಡಿದ್ದ ನರಸಿಂಹಯ್ಯ ಅವರು ಸ್ವತಃ ಕಾದಂಬರಿ ಬರೆಯಲು ಮುಂದಾದರು.
ಕನ್ನಡದ ಶೆರ್ಲಾಕ್ ಹೋಮ್ಸ್ ಜನನ: 1952 ರಲ್ಲಿ ಎನ್.ನರಸಿಂಹಯ್ಯನವರು ತಮ್ಮ ಪ್ರಥಮ ಪತ್ತೇದಾರಿ ಕಾದಂಬರಿ ಪತ್ತೇದಾರ ಪುರುಷೋತ್ತಮ ಬರೆದರು. ಮುಂದೆ ಇವರು ಸೃಷ್ಟಿಸಿದ ಪಾತ್ರಗಳಾದ ಗಾಳಿರಾಯ, ಪತ್ತೇದಾರ ಮಧುಸೂದನ, ಪತ್ತೇದಾರ ಅರಿಂಜ ಎಲ್ಲರೂ ಓದುಗರ ಪಾಲಿನ ಹೀರೋಗಳಾಗಿ ಮೆರೆದರು. ಆದರೆ, ಪಾತ್ರ ಸೃಷ್ಟಿಕರ್ತ ಮಾತ್ರ ಬಡವಾಗುತ್ತಾ ಹೋಗಿದ್ದ.
ಪ್ರಶಸ್ತಿ ಸನ್ಮಾನ: ಎನ್.ನರಸಿಂಹಯ್ಯನವರಿಗೆ 1992ರಲ್ಲಿ ದಾವಣಗೆರೆಯಲ್ಲಿ ಜರುಗಿದ 61ನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನಿಸಲಾಯಿತು. ಅದೇ ವರ್ಷ ಅವರಿಗೆ ಅತ್ತಿಮಬ್ಬೆ ಪ್ರತಿಷ್ಠಾನದಿಂದ ಸನ್ಮಾನಿಸಲಾಯಿತು. 1997 ನೆಯ ಸಾಲಿನಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿತು.
ಎಂಟು ಮರುಮುದ್ರಣಗೊಂಡ ಭಯಂಕರ ಭೈರಾಗಿ ಸೇರಿದಂತೆ ಇವರ ಎಲ್ಲಾ 550ಕ್ಕೂ ಅಧಿಕ ಕಾದಂಬರಿಗಳು ಜನಪ್ರಿಯತೆ ಗಳಿಸಿರುವುದು ವಿಶೇಷ. ಕನ್ನಡಿಗರಲ್ಲಿ ಓದುವ ಗೀಳು ಹುಟ್ಟುಹಾಕಿದ ಸಾಹಿತಿಗೆ ಒನ್ ಇಂಡಿಯಾ ಕನ್ನಡ ನಮನ ಸಲ್ಲಿಸುತ್ತದೆ.












Click it and Unblock the Notifications