ಕಾಂಗ್ರೆಸ್ಸಿಗೆ ಪಾಠ ಕಲಿಸಲು ಜೆಡಿಎಸ್ ತಟಸ್ಥ
ಈ ನಡುವೆ, ಕಾಂಗ್ರೆಸ್ಸಿಗೆ ಪಾಠ ಕಲಿಸುವ ಹುಮ್ಮಸ್ಸಿನಲ್ಲಿ ಇಂದು ಒಂದು ದಿನದ ಮಟ್ಟಿಗೆ ತನ್ನ ಜಾತ್ಯಾತೀತ ಅಸ್ತ್ರವನ್ನು ತ್ಯಾಗ ಮಾಡಿ 'ಕೋಮುವಾದಿ'ಬಿರುದಾಂಕಿತ ಬಿಜೆಪಿಯ ಗೆಲುವಿಗೆ ಪೂಕವಾಗಿರಲು ಜೆಡಿಎಸ್ ನಿರ್ಧರಿಸಿದೆ. ಎಚ್ ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಬುಧವಾರ ರಾತ್ರಿ ಸಭೆ ಸೇರಿದ ಶಾಸಕರು ಯಾರಿಗೆ ಮತ ಹಾಕಬೇಕು ಎಂಬುದನ್ನು ಗುರುವಾರ ಬೆಳಿಗ್ಗೆ ನಿರ್ಧರಿಸಲು ತೀರ್ಮಾನಿಸಿದರು. ಆದರೆ ತಟಸ್ಥ ನೀತಿಗೆ ಅಂಟಿಕೊಳ್ಳುವುದು ಬಹುತೇಕ ಖಚಿತವಾಗಿದೆ.
ಇದಕ್ಕೆ ಎರಡು ಪ್ರಮುಖ ಕಾರಣಗಳಿವೆ; ಒಂದು ಸದಾನಂದ ಗೌಡರ ಸರಕಾರ ಪತನವಾಗಿ ಚುನಾವಣೆ ಎದುರಾದರೆ ಎಂಬ ಭಯ ಜೆಡಿಎಸ್ ಶಾಸಕರನ್ನು ಕಾಡುತ್ತಿದೆ. ಮತ್ತೊಂದು, ದೊಡ್ಡ ಗೌಡರು ಗೌಡರನ್ನೇ ಸೋಲಿಸಿದರು ಎಂದು ಸುಖಾಸುಮ್ಮನೆ ಅಪಖ್ಯಾತಿ ಸಂಪಾದಿಸಲು ಜೆಡಿಎಸ್ ಸಿದ್ಧವಿಲ್ಲ. ಹೀಗಾಗಿ ಎಲ್ಲ ಶಾಸಕರು ಮುಖ್ಯಮಂತ್ರಿ ಆಯ್ಕೆ ಪರವಾಗಿಯೇ ಇದ್ದಾರೆ ಎನ್ನಲಾಗಿದೆ. ಈ ಲೆಕ್ಕಾಚಾರದ ಜತೆಗೆ ಕಾಂಗೆಸ್ಗೆ ಪಾಠ ಕಲಿಸುವುದೂ ಸೇರಿದೆ ಎನ್ನಲಾಗಿದೆ.
ಆಲಂಗೂರು ಶ್ರೀನಿವಾಸ್ ಕಾರ್ಯಾರ್ಥ: ಗಮನಾರ್ಹವೆಂದರೆ, ಬೆಂಗಳೂರಿನಲ್ಲಿದ್ದರೆ ಎಡವಟ್ಟು ಸಂಭವಿಸಬಹುದು ಎಂದು ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಶಾಸಕರ ದಂಡು ಕೋಲಾರದ ಮುಳಬಾಗಿಲಿಗೆ ತೆರಳಿ, ಇತ್ತೀಚೆಗೆ ನಿಧನರಾದ ಮಾಜಿ ಸಚಿವ, ಜೆಡಿಎಸ್ ನಾಯಕ ಆಲಂಗೂರು ಶ್ರೀನಿವಾಸ್ ಅವರ ಕಾರ್ಯದಲ್ಲಿ ಪಾಲ್ಗೊಂಡು 'ಸ್ವಾಮಿ ಕಾರ್ಯ- ಸ್ವಕಾರ್ಯ' ನೆರವೇರಿಸುವ ಆಲೋಚನೆಯಲ್ಲಿದೆ.