ಶ್ರೀರಾಮುಲು ಶಾಸಕರ ಅಮಾನತು ರದ್ದು: ಸದಾನಂದ ಸೇಫ್

ಗಮನಾರ್ಹವೆಂದರೆ ಶ್ರೀರಾಮುಲು ಮೇಲಿನ ಹಿಡಿತವನ್ನು ಇನ್ನೂ ತನ್ನ ಕೈಯಲ್ಲಿಟ್ಟುಕೊಂಡಿರುವ ರಾಜ್ಯ ಬಿಜೆಪಿ ನಾಯಕರು ಇಬ್ಬರು ಸಂಸದರ ಅಮಾನತು ವಾಪಸ್ ಪಡೆಯುವ ನಿರ್ಧಾರವನ್ನು ಹೈಕಮಾಂಡ್ಗೆ ಬಿಡಲಾಗಿದೆ ಎಂದಿದ್ದಾರೆ.
ವಿಧಾನ ಪರಿಷತ್ ಚುನಾವಣೆ ವೇಳೆ ಪಕ್ಷವು ಶಾಸಕರ ಮೇಲೆ ವಿಪ್ ಚಾಟಿ ಬೀಸುವುದು ಖಚಿತ ಎಂಬ ಸುಳಿವು ಅರಿತ ಶಾಸಕ ಜಿ. ಸೋಮಶೇಖರ ರೆಡ್ಡಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಜತೆ ರಾಜೀ ಸಂಧಾನಕ್ಕೆ ಮುಂದಾಗಿದ್ದಾರೆ ಎಂಬುದರ ಬಗ್ಗೆ ದಟ್ಸ್ ಕನ್ನಡ ಈ ಹಿಂದೆಯೇ ಸುಳಿವು ನೀಡಿತ್ತು.
ಬಳ್ಳಾರಿಯ ಶಾಸಕ ಸೋಮಶೇಖರ ರೆಡ್ಡಿ, ಕಂಪ್ಲಿ ಕ್ಷೇತ್ರದ ಸುರೇಶ್ಬಾಬು, ಕೂಡ್ಲಿಗಿ ಕ್ಷೇತ್ರದ ನಾಗೇಂದ್ರ ಹಾಗೂ ಮೇಲ್ಮನೆ ಸದಸ್ಯ ಮೃತುಂಜಯ ಜಿನಗಾರ ಅವರು ಇತ್ತೀಚಿನ ಬಳ್ಳಾರಿ ಉಪಚುನಾವಣೆ ಸಂದರ್ಭ ಶ್ರೀರಾಮುಲು ಪರ ಪ್ರಚಾರ ನಡೆಸಿದ್ದರಿಂದ ನ. 25ರಂದು ಅಮಾನತುಗೊಳಿಸಲಾಗಿತ್ತು.
ಅಮಾನತುಗೊಂಡ ವಿಧಾನಸಭೆಯ ಮೂವರು ಸದಸ್ಯರಿಗೆ ಅಮಾನತು ಆದೇಶ ವಾಪಸ್ ಪಡೆಯದೆ ಮತ ನೀಡುವಂತೆ ಕೇಳುವುದು ಕಷ್ಟವಾಗಿತ್ತು. ಈಗಾಗಲೇ ಪಕ್ಷದ ನಾಯಕರು ಈ ಮೂವರೊಂದಿಗೆ ಮಾತುಕತೆ ನಡೆಸಿದ ಸಂದರ್ಭ ಅಮಾನತು ಆದೇಶ ವಾಪಸು ಪಡೆದರೆ ತಾವು ಸದಾನಂದಗೌಡರಿಗೇ ಮತ ನೀಡುವುದಾಗಿ ಸ್ಪಷ್ಟ ಭರವಸೆ ನೀಡಿದ್ದಾರೆ ಎನ್ನಲಾಗಿದೆ.












Click it and Unblock the Notifications