ಎಫ್ಐಆರ್ ದಾಖಲಿಸಿದ್ದಕ್ಕೆ ಎಸ್ಸೆಂ ಕೃಷ್ಣ ಖಾರ ಪ್ರತಿಕ್ರಿಯೆ
ಎಫ್ಐಆರ್ ನಲ್ಲಿ ತಿಳಿಸಿದಂತೆ ತಾವು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಯಾರಿಗೇ ಆಗಲಿ ಅಕ್ರಮ ಗಣಿಗಾರಿಕೆ ನಡೆಸಲು ಪರವಾನಗಿ ನೀಡಿರಲಿಲ್ಲ. ನಿಜ ಹೇಳಬೇಕೆಂದರೆ, ಗಣಿ ಮತ್ತು ಭೂವಿಜ್ಞಾನ ಖಾತೆ ತಮ್ಮ ಸುಪರ್ದಿಯಲ್ಲಿ ಇರಲೇ ಇಲ್ಲ. ಹೀಗಿದ್ದ ಮೇಲೆ ಅಕ್ರಮ ಎಸಗಲು ಹೇಗೆ ಸಾಧ್ಯ ಎಂದು ಕೃಷ್ಣ ಖಾರವಾಗಿ ನುಡಿದರು.
ಎಸ್ಎಮ್ ಕೃಷ್ಣ ಜೊತೆ ಮಾಜಿ ಮುಖ್ಯಮಂತ್ರಿಗಳಾದ ಧರ್ಮ ಸಿಂಗ್ ಮತ್ತು ಎಚ್ ಡಿ ಕುಮಾರಸ್ವಾಮಿ ವಿರುದ್ಧವೂ ಲೋಕಾಯುಕ್ತ ಪೊಲೀಸರು ಪ್ರಥಮ ಮಾಹಿತಿ ವರದಿಯನ್ನು ದಾಖಲಿಸಿದ್ದಾರೆ. ಕುಮಾರಸ್ವಾಮಿ ವಿರುದ್ಧ 550 ಎಕರೆ ಜಮೀನಿನಲ್ಲಿ ಅಕ್ರಮ ಗಣಿಗಾರಿಕೆಗೆ ಪರವಾನಗಿ ನೀಡಿದ ಆರೋಪ ಹೊರಿಸಲಾಗಿದೆ. ಧರ್ಮ ಸಿಂಗ್ ವಿರುದ್ಧವೂ ಅಕ್ರಮವಾಗಿ ಕಬ್ಬಿಣ ಮತ್ತು ಮ್ಯಾಂಗನೀಸ್ ಅದಿರನ್ನು ಸಾಗಿಸಲು ಪರವಾನಗಿ ನೀಡಿ, ರಾಜ್ಯದ ಬೊಕ್ಕಸಕ್ಕೆ 23 ಕೋಟಿ ರು. ನಷ್ಟ ಮಾಡಿದ ಆರೋಪ ಹೊರಿಸಲಾಗಿದೆ.
ಮಾಜಿ ಮುಖ್ಯಮಂತ್ರಿಗಳ ಹೊರತಾಗಿ, ನಾಲ್ವರು ಐಎಎಸ್ ಆಫೀಸರ್ ಗಳಾದ ಗಂಗಾರಾಮ್ ಬಡೇರಿಯಾ, ಮಹೇಂದ್ರ ಜೈನ್, ಐಆರ್ ಪೆರುಮಾಳ್, ವಿ. ಉಮೇಶ್, ನಿವೃತ್ತ ಅಧಿಕಾರಿಗಳಾದ ಕೆಎಸ್ ಮಂಜುನಾಥ್, ಡಿಎಸ್ ಅಶ್ವತ್ಥ್, ಮಾಜಿ ಐಪಿಎಸ್ ಅಧಿಕಾರಿ ಮಾಧವನ್ ಹರಿಸಿಂಗ್ ಮತ್ತು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಮಾಜಿ ನಿರ್ದೇಶಕ ಬಸಪ್ಪ ರೆಡ್ಡಿ, ಮೈಸೂರು ಮಿನರಲ್ ಲಿ. ಜನರಲ್ ಮ್ಯಾನೇಜರ್ ಕೆ ಶ್ರೀನಿವಾಸ್ ವಿರುದ್ಧವೂ ಎಫ್ಐಆರ್ ಜಡಿಯಲಾಗಿದೆ.