2013ಕ್ಕೆ ಕಡೂರು ಚಿಕ್ಕಮಗಳೂರು ರೈಲು ಓಡಲಿದೆ!
ವಿಧಾನಪರಿಷತ್ ನ ಪ್ರಶ್ನೋತ್ತರ ವೇಳೆಯಲ್ಲಿ ಚಿಕ್ಕಮಾದು ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ ಸದಾನಂದ ಗೌಡರು, ಕಡೂರು -ಚಿಕ್ಕಮಗಳೂರು ರೈಲು ಸಂಪರ್ಕ ಯೋಜನೆ ನಿಗದಿತ ವೇಳೆಗೆ ಪೂರ್ಣಗೊಳ್ಳಲಿದೆ. 2012ರಲ್ಲಿ ಸಖರಾಯಪಟ್ಟಣದವರೆಗೂ ಹಾಗೂ 2013ರಲ್ಲಿ ಸಂಪೂರ್ಣ ಕಾಮಗಾರಿ ಮುಗಿಯಲಿದೆ ಎಂದು ಹೇಳಿದರು.
ಮೊದಲ ಹಂತದಲ್ಲಿ ಕಣಿವೆ ಹಳ್ಳವರೆಗೂ 25 ಕಿ.ಮೀ ಮುಗಿಯಲಿದೆ. ನಂತರ ಉಳಿದ 21 ಕಿ.ಮೀ ಕಾಮಗಾರಿ ಸಂಪೂರ್ಣಗೊಳಿಸಲಾಗುತ್ತದೆ ಎಂದು ವಿವರಿಸಿದರು.
ಸುಮಾರು 456 ಕೋಟಿ ವೆಚ್ಚದ ಯೋಜನೆಗೆ 80 ಕೋಟಿ ರು ಹೆಚ್ಚಿಗೆ ನೀಡಲಾಗಿದೆ. 10.18 ಎಕರೆ ಪ್ರದೇಶದಲ್ಲಿ ಕಣಿವೆ ಹಳ್ಳಿ ರೈಲ್ವೇ ಸ್ಟೇಷನ್ ನಿರ್ಮಾಣಕ್ಕೆ 4.77 ಲಕ್ಷ ರೂ ಮೀಸಲಿಡಲಾಗಿದೆ. 3.75 ಕೋಟಿ ರು ಅಗತ್ಯವಿದೆ.
ಹಿರೇಮಗಳೂರು ನಿಲ್ದಾಣಕ್ಕೆ 35.20 ಎಕರೆ ಮೀಸಲಿಡಲಾಗಿದ್ದು, 94.39 ಲಕ್ಷ ರೂ ಖರ್ಚಾಗಲಿದೆ. ಮಾಚಗೊಂಡನಹಳ್ಳಿ, ದೇವನಹಳ್ಳಿ, ದೇವನೂರು, ಬ್ರೀರೂರು ಹಾಗೂ ಅಜ್ಜಂಪುರದಲ್ಲಿ ರೈಲ್ವೇ ಕ್ರಾಸಿಂಗ್ ಅಳವಡಿಸಲಾಗುತ್ತದೆ.
ರಾಮನಹಳ್ಳಿ, ಬಿಸಲೆಹಳ್ಳಿ, ಸಖರಾಯಪಟ್ಟಣದಲ್ಲಿ ರೈಲ್ವೇ ನಿಲ್ದಾಣ ನಿರ್ಮಾಣಕ್ಕೆ ಜಿಲ್ಲಾಡಳಿತ ಅಗತ್ಯ ಭೂಮಿಯನ್ನು ಒದಗಿಸಿದೆ ಎಂದು ಸದಾನಂದ ಗೌಡರು ಹೇಳಿದರು.