ಸರಸ್ವತಿ ಸಮ್ಮಾನ ವಿಜೇತ ಭೈರಪ್ಪರ ಭಾಷಣ-1
ಮಾನ್ಯ ಡಾ. ಕರಣಸಿಂಹರೆ, ಕೆ.ಕೆ. ಬಿರ್ಲಾ ಪ್ರತಿಷ್ಠಾನದ ಅಧ್ಯಕ್ಷರೆ, ಅದರ ನಿರ್ದೇಶಕರಾದ ಭಟ್ಟಾಚಾರ್ಯರೆ, ನನ್ನ ಕಾದಂಬರಿ ಮಂದ್ರ'ವನ್ನು 2010ರ ಸರಸ್ವತಿ ಸಮ್ಮಾನಕ್ಕೆ ಆರಿಸಿದ ಸಮಿತಿಗೆ ಧನ್ಯವಾದಗಳು.
ಹಾಗೆಯೇ ಮೊದಲಿನಿಂದಲೂ ಭಾರತದ ಹಲವಾರು ಭಾಷೆಗಳಲ್ಲಿ ನನ್ನ ಸಾಹಿತ್ಯ ಜೀವನದ ಬೆನ್ನೆಲುಬಾಗಿರುವ ಅಸಂಖ್ಯ ಓದುಗರಿಗೆ ನಾನು ಋಣಿಯಾಗಿದ್ದೇನೆ. ನನ್ನ ಜೀವನವನ್ನು ನೆನಸಿಕೊಳ್ಳದೆ ನನ್ನ ಸಾಹಿತ್ಯದ ಉಗಮ ಮತ್ತು ಬೆಳವಣಿಗೆಯನ್ನು ಕುರಿತು ಮಾತನಾಡುವುದು ಸಾಧ್ಯವಿಲ್ಲ.
ಕರ್ನಾಟಕದ ಒಂದು ಹಿಂದುಳಿದ ಹಳ್ಳಿಯ ತೀರ ಬಡತನದ ಕುಟುಂಬದಲ್ಲಿ ನಾನು ಹುಟ್ಟಿದೆ. ದುಡಿಮೆ ಮತ್ತು ಪಾಲನೆಗಳೆಲ್ಲ ನನ್ನ ತಾಯಿಯದಾಗಿತ್ತು. ತಂದೆಯು ಅತ್ಯಂತ ಬೇಜವಾಬ್ದಾರಿಯ ಮನುಷ್ಯ.
ನಾನು ಹತ್ತು ವರ್ಷದವನಾಗಿದ್ದಾಗ ನನಗೆ, ಹದಿನೈದು ದಿನದ ಹಿಂದೆ ಮದುವೆಯಾಗಿದ್ದ ಅಕ್ಕನಿಗೆ ಮತ್ತು ನನಗಿಂತ ಎರಡು ವರ್ಷಕ್ಕೆ ಹಿರಿಯನಾದ ಅಣ್ಣನಿಗೆ ಪ್ಲೇಗು ಬಡಿದು ಅವರಿಬ್ಬರೂ ಒಂದು ಗಂಟೆಯ ಅಂತರದಲ್ಲಿ ಸತ್ತುಹೋದರು. ಹೇಗೋ ನಾನು ಉಳಿದುಕೊಂಡೆ.
ಎರಡು ವರ್ಷಗಳ ನಂತರ ತಾಯಿಯೂ ಪ್ಲೇಗಿನಿಂದ ಸತ್ತಳು. ನಾನು ನಾಲ್ಕು ಮೈಲಿ ದೂರದ ಒಂದು ಊರಿನಲ್ಲಿ ವಾರಾನ್ನ ಮಾಡಿಕೊಂಡು ಓದನ್ನು ಮುಂದುವರೆಸಿದೆ. ನನಗೆ ಹದಿನಾಲ್ಕು ವರ್ಷವಾಗಿದ್ದಾಗ ನಾಲ್ಕು ವರ್ಷ ವಯಸ್ಸಿನ ತಂಗಿ ಕಾಲರಾದಿಂದ ಸತ್ತಳು.
ನನಗೆ ಹದಿನೈದು ವರ್ಷವಾಗಿದ್ದಾಗ ಆರು ವರ್ಷ ವಯಸ್ಸಿನ ನನ್ನ ತಮ್ಮನು ಗೊತ್ತಿಲ್ಲದ ಒಂದು ಕಾಯಿಲೆಯಿಂದ ಸತ್ತು ನಾನೇ ಅವನ ಹೆಣವನ್ನು ಹೆಗಲ ಮೇಲೆ ಹೊತ್ತು ಸ್ಮಶಾನಕ್ಕೆ ಒಯ್ದು ಊರಿನ ತೋಟಿಯ ಸಹಾಯದಿಂದ ಸೌದೆಯನ್ನು ಒಟ್ಟಿ ಅವನನ್ನು ಸುಟ್ಟು ಹತ್ತಿರದ ಒಂದು ತೋಟದ ಬಾವಿಯಲ್ಲಿ ಸ್ನಾನ ಮಾಡಿದೆ.
ಈ ಅನುಭವಗಳೆಲ್ಲ ನನ್ನಲ್ಲಿ ಸಾವು ಎಂದರೇನು? ಅದರ ಅರ್ಥವೇನು? ಅದು ಯಾಕೆ ಬರುತ್ತದೆ? ಎಂಬ ಪ್ರಶ್ನೆಗಳಾಗಿ ಕಾಡತೊಡಗಿದವು.
ನಾನು ಮೈಸೂರಿನಲ್ಲಿ ಇಂಟರ್ಮೀಡಿಯೆಟ್ ಓದುವಾಗ ತತ್ತ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಯಾಮುನಾಚಾರ್ಯರನ್ನು ಕಂಡು ನನ್ನ ಈ ಪ್ರಶ್ನೆಗಳನ್ನು ತೋಡಿಕೊಂಡೆ.
ಅವರು ಸಠೀಕಾ ಕಠೋಪನಿಷತ್ತಿನ ಕನ್ನಡ ಅನುವಾದದ ಒಂದು ಪುಸ್ತಕವನ್ನು ಕೊಟ್ಟು ಓದಲು ಹೇಳಿದರು. ಮುಂದೆ...
ಭೈರಪ್ಪ ಅವರ ದೃಷ್ಟಿಯಲ್ಲಿ ಸಾಹಿತ್ಯ ಎಂದರೆ ಏನು...?