ಲೋಕಾಯುಕ್ತ ರೇಸ್ ನಲ್ಲಿ ನಾನಿಲ್ಲ: ನ್ಯಾ. ಮಳೀಮಠ್
ಈ ಮಧ್ಯೆ ನ್ಯಾಯಮೂರ್ತಿ ಮಳೀಮಠ್ ಅವರ ಹೆಸರು ಸಹಾ ಓಡಾಡುತ್ತಿದೆ. ನೂತನ ಲೋಕಾಯುಕ್ತ ಆಯ್ಕೆಯಲ್ಲಿ ರೇಸ್ ನಲ್ಲಿ ನಾನಿಲ್ಲ ಎಂದು ಭಾನುವಾರ(ನ.6) ದಾವಣಗೆರೆ ನಗರಕ್ಕೆ ಆಗಮಿಸಿದ್ದ ಕರ್ನಾಟಕ ಕಾನೂನು ಆಯೋಗದ ಅಧ್ಯಕ್ಷ ಡಾ.ವಿ.ಎಸ್ ಮಳೀಮಠ್ ಅವರು ಹೇಳಿದ್ದಾರೆ.
ಏನು ಕಾರಣ?: ಸರ್ಕಾರ ಮೊದಲಿಗೆ ಮಳೀಮಠ್ ಅವರ ಹೆಸರನ್ನು ಸೂಚಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಮಳೀಮಠ್, ರಾಜಕೀಯ ಬೆಳವಣಿಗೆಗಳನ್ನು ಪರಿಗಣಿಸಿ ಸ್ಥಾನ ಸ್ವೀಕರಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. ಯಾವುದೇ ಅಂತಿಮ ತೀರ್ಮಾನಕ್ಕೆ ಬಂದಿಲ್ಲ ಎಂದಿದ್ದರು.
ನ್ಯಾಯಮೂರ್ತಿ ಶಿವರಾಜ ಪಾಟೀಲ್ ಆರೋಪಗಳಿಗೆ ಬೇಸತ್ತು ರಾಜಿನಾಮೆ ನೀಡಿದ್ದು, ನಂತರ ನ್ಯಾಯಮೂರ್ತಿ ಬನ್ನೂರು ಮಠ್ ಅವರ ಹೆಸರನ್ನು ರಾಜ್ಯಪಾಲರ ಮುಂದಿಟ್ಟು ವಿಫಲವಾಗಿದ್ದು, ಅವರಿಗೆ ಬೇಸರ ತರಿಸಿದೆ ಎಂದು ಮೂಲಗಳು ತಿಳಿಸಿವೆ.
ತಮ್ಮ ವಿಚಾರದಲ್ಲೂ ರಾಜ್ಯಪಾಲರು ವ್ಯತಿರಿಕ್ತ ಕ್ರಮ ಕೈಗೊಳ್ಳಬಹುದು ಎಂಬ ಅನುಮಾನ ಸಹ ಮಳೀಮಠ್ ಅವರ ಈ ನಿರ್ಧಾರಕ್ಕೆ ಕಾರಣ ಎನ್ನಲಾಗಿದೆ. ಸರ್ಕಾರ ಮಾತ್ರ ಯಾರಾದರೂ ಆಗಲಿ ಎಂಬ ಭಾವನೆಯನ್ನು ತೋರುತ್ತಿದೆ.