ಕೆಂಡದ ಮೇಲಿನ ಬೂದಿ ಹಾರಿಸಿದ ಅಡ್ವಾಣಿ ಭೇಟಿ
ಬೂದಿ ಹಾರಿದ್ದರಿಂದ ಒಳಒಳಗೇ ಕಿಡಿಕಾರುತ್ತಿದ್ದ ಕೆಂಡ ಮತ್ತೆ ನಿಗಿನಿಗಿ ಉರಿಯುವಂತಾಗಿದೆ. ಇದಕ್ಕೆ ಪೂರಕವೆಂಬಂತೆ ಅಧಿಕಾರ ಸಿಗದ ಒಂದಿಷ್ಟು ನಾಯಕರು ಕೆಂಡಕ್ಕೆ ತುಪ್ಪ ಸುರಿದು, ಭಿನ್ನಮತ ಭುಗಿಲೇಳುವಂತೆ ಮಾಡುತ್ತಿದ್ದಾರೆ.
ವಸ್ತುಸ್ಥಿತಿಯೇನೆಂದರೆ, ಜೈಲಿನಲ್ಲಿರುವ ಯಡಿಯೂರಪ್ಪ ಮತ್ತು ಅವರ ಕಟ್ಟಾ ಬೆಂಬಲಿಗರಿಗೆ ಅಡ್ವಾಣಿ ಬೆಂಗಳೂರಿಗೆ ಕಾಲಿಡುವುದು ಬೇಕಿರಲಿಲ್ಲ. ಹಾಗಾಗಿ, ಸಭೆಯಲ್ಲಿ ಭಾಗವಹಿಸಿ ಮುಜುಗರ ಅನುಭವಿಸುವುದಕ್ಕಿಂತ ತಲೆಮರೆಸಿಕೊಂಡಿರುವುದೇ ಲೇಸೆಂದು ಹಿಂಡುಹಿಂಡು ನಾಯಕರು ಸಭೆಯಿಂದ ದೂರ ಉಳಿದರು.
ಯಡಿಯೂರಪ್ಪನವರನ್ನು ನೇರವಾಗಿಯಲ್ಲದಿದ್ದರೂ, ಅಡ್ವಾಣಿಯವರು ತಮ್ಮ ಭಾಷಣದಲ್ಲಿ ಮಾತಿನ ಚಾಟಿ ಬೀಸಿದ್ದಾರೆ. ಭ್ರಷ್ಟರು ಯಾರೇ ಆಗಿದ್ದರೂ ಸಹಿಸುವುದಿಲ್ಲ ಎಂದು ಜೈಲಲ್ಲಿರುವ ಮತ್ತು ಭ್ರಷ್ಟಾಚಾರದ ವಿಚಾರಣೆ ಎದುರಿಸುತ್ತಿರುವ ನಾಯಕರಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ಅಧಿಕಾರ ಸಿಗದೆ ವಿಲಿವಿಲಿಗುಟ್ಟುತ್ತಿರುವ ಮೈಸೂರಿನ ಚಾಮರಾಜ ಕ್ಷೇತ್ರದ ಶಂಕರಲಿಂಗೇಗೌಡ ತಮ್ಮ ಅಸಮಾಧಾನವನ್ನು ಬಹಿರಂಗಗೊಳಿಸಿದ್ದಾರೆ. ಬಿಜೆಪಿ ನಾಯಕರು ಜೈಲಿನಲ್ಲಿರುವಾಗ ರಥಯಾತ್ರೆ ನಡೆಸುವುದು ಸರಿಯಲ್ಲ ಎಂದು ಹೇಳಿದ್ದಾರೆ. ಈಗ ತಣ್ಣಗೆ ಹೊತ್ತಿಕೊಂಡಿರುವ ಕಿಡಿ ತಣ್ಣಗಾಗುವುದೋ, ಮತ್ತೆ ಹೊತ್ತಿಕೊಂಡು ಕಮಲದ ಪಕಳೆಗಳು ನಲುಗುವಂತೆ ಮಾಡುವುದೋ ಕಾದುನೋಡಬೇಕು.