ನ್ಯಾ.ಬನ್ನೂರಮಠರನ್ನೂ ಬಿಡದ ದಶಕದಷ್ಟು ಹಳೆಯ 'ಭೂ'ತ !
ಕರ್ನಾಟಕ ರಾಜ್ಯ ನ್ಯಾಯಾಂಗ ಇಲಾಖೆಯ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದಲ್ಲಿ ಇವರು ಬೈಲಾ ಉಲ್ಲಂಘಿಸಿ ಅಳ್ಳಾಲಸಂದ್ರದಲ್ಲಿ ನಿವೇಶನ ಮಂಜೂರು ಮಾಡಿಸಿಕೊಂಡಿರುವ ಅಂಶ ಬೆಳಕಿಗೆ ಬಂದಿದೆ. 6,600 ಚದರ ಅಡಿ ನಿವೇಶನವನ್ನು ಅವರು ಪಡೆದುಕೊಂಡಿರುವ ಬಗ್ಗೆ ದಾಖಲೆಗಳು ಲಭ್ಯವಾಗಿವೆ.
ನಿವೇಶನ ಸೌಲಭ್ಯ: ದಾಖಲೆಗಳ ಅನ್ವಯ ಬನ್ನೂರಮಠ ಅವರಿಗೆ 2001ರ ಸೆಪ್ಟೆಂಬರ್ 18ರಂದು 2118/ಎ ಸಂಖ್ಯೆಯ ನಿವೇಶನ ಮಂಜೂರು ಆಗಿದೆ. ಇದು ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ- 1959ಕ್ಕೆ ವಿರುದ್ಧವಾಗಿದೆ. ನಿವೇಶನ ಮಂಜೂರಾತಿ, ಸಂಘದ ಬೈಲಾಗೂ ವ್ಯತಿರಿಕ್ತವಾಗಿದೆ. ಈ ಬೈಲಾದ 10(ಬಿ) ಕಲಮಿನ ಅನ್ವಯ ಕರ್ನಾಟಕದ ನ್ಯಾಯಾಂಗ ಇಲಾಖೆಯಲ್ಲಿ ನಿವೇಶನ ಆಕಾಂಕ್ಷಿಗಳು ಸದಸ್ಯರಾಗಿರಬೇಕು. ಇಲ್ಲದಿದ್ದರೆ ಅವರು ನಿವೇಶನ ಅಥವಾ ಮನೆ ಪಡೆಯಲು ಅರ್ಹರಲ್ಲ.
ಆದರೆ ಸಂವಿಧಾನದ 124(2) ಮತ್ತು 127ನೇ ವಿಧಿಯ ಪ್ರಕಾರ ಸುಪ್ರೀಂಕೋರ್ಟ್ ಅಥವಾ ಹೈಕೋರ್ಟ್ ನ್ಯಾಯಮೂರ್ತಿಗಳು ನ್ಯಾಯಾಂಗ ಇಲಾಖೆಗೆ ಸಂಬಂಧಿಸಿದ ಸಂಘಕ್ಕೆ ಸದಸ್ಯರಾಗಲು ಅರ್ಹರಲ್ಲ. ಇದೇ ವಿಷಯವನ್ನು ಸುಪ್ರೀಂಕೋರ್ಟ್ ಪೂರ್ಣಪೀಠವೂ ಸ್ಪಷ್ಟಪಡಿಸಿದೆ. ಇದನ್ನು ಗಣನೆಗೆ ತೆಗೆದುಕೊಂಡರೆ ಸಂಘದಿಂದ ನ್ಯಾ. ಬನ್ನೂರಮಠ ಅವರು ನಿವೇಶನ ಪಡೆದಿರುವುದು ಇವುಗಳ ಉಲ್ಲಂಘನೆ ಆದಂತಾಗಿದೆ.
ವಿಶೇಷವೆಂದರೆ ಇವರು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ಅಧಿಕಾರ ಸ್ವೀಕರಿಸಿದ ಮೇಲೆ 1995ರಲ್ಲಿ ನ್ಯಾಯಾಂಗ ಬಡಾವಣೆಯಲ್ಲಿ ನಿವೇಶನ ಮಂಜೂರು ಮಾಡಿಸಿಕೊಂಡಿದ್ದಾರೆ.