ಉಜ್ಜಯಿನಿ ಶ್ರೀ ಶಿವಾಚಾರ್ಯ ಜಗದ್ಗುರು ತೀವ್ರ ಅಸ್ವಸ್ಥ
ಮರುಳಸಿದ್ಧ ಶಿವಾಚಾರ್ಯರು ಯಕೃತ್ತು ಸಮಸ್ಯೆಯಿಂದ ತೀವ್ರವಾಗಿ ನರಳುತ್ತಿದ್ದು, ಕೆಲ ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಳಗಾವಿಯ ಕೆಎಲ್ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದರು. ನಂತರ ಪುನಃ ಅನಾರೋಗ್ಯಕ್ಕೆ ಈಡಾಗಿ ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚೇತರಿಸಿಕೊಳ್ಳದ ಕಾರಣ ಲಿವರ್ ಕಸಿಗಾಗಿ ದೆಹಲಿಯ ಅಪೋಲೋ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. 10 ದಿನಗಳ ಕಾಲ ದೆಹಲಿ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು.
ಬೆಂಗಳೂರಿನ ಅಪೋಲೋ ಆಸ್ಪತ್ರೆಯ ವೈದ್ಯರು ಸೋಮವಾರ ಬೆಳಿಗ್ಗೆ ದೆಹಲಿ ತಲುಪಿ ಶ್ರೀಗಳ ಇಚ್ಛೆಯ ಮೇರೆಗೆ ವಿಶೇಷ ವಿಮಾನದಲ್ಲಿ ದೆಹಲಿಯಿಂದ ತೋರಣಗಲ್ಲುನ ಜಿಂದಾಲ್ ವಿಮಾನ ನಿಲ್ದಾಣಕ್ಕೆ ಸಂಜೆ 4.30ರ ಸುಮಾರಿಗೆ ಕರೆತಂದರು. ಜಿಂದಾಲ್ ವಿಮಾನ ನಿಲ್ದಾಣದಿಂದ ಕೂಡ್ಲಿಗಿ - ಕೊಟ್ಟೂರು ಸಮೀಪದ ಉಜ್ಜಯಿನಿ ಪೀಠಕ್ಕೆ ಶ್ರೀಗಳನ್ನು ಆಂಬುಲೆನ್ಸ್ ಮೂಲಕ ಕರೆದುಕೊಂಡು ಹೋಗಲಾಯಿತು. ರಾಜ್ಯದ ವಿವಿಧೆಡೆಯಿಂದ ಭಕ್ತ ಸಮೂಹ ಸಾಗರೋಪಾದಿಯಾಗಿ ಉಜ್ಜಯಿನಿಗೆ ಶ್ರೀಗಳ ದರ್ಶನಕ್ಕಾಗಿ ಆಗಮಿಸುತ್ತಿದ್ದಾರೆ.
ಶ್ರೀಗಳ ಜೊತೆ ಇರುವ ಬೆಂಗಳೂರು ಮತ್ತು ದೆಹಲಿಯ ಅಪೋಲೋ ಆಸ್ಪತ್ರೆಯ ವೈದ್ಯ ಡಾ. ವೀರೇಂದ್ರ ಕುಮಾರ್, ಡಾ. ಅಸ್ಲಾಂ ಪರ್ವಿನ್ ಡಾ. ರವಿಶಂಕರ ಭಟ್, ಡಾ. ವಾಸು, ಡಾ. ಸುಭಾಷ್ ಗುಪ್ತ ಪ್ರಕಾರ, ಶ್ರೀಗಳು ಚೇತರಿಸಿಕೊಳ್ಳುತ್ತಿದ್ದು, ಸಾರ್ವಜನಿಕರಿಗೆ ದರ್ಶನ ನೀಡಲಿದ್ದಾರೆ, ಭಕ್ತರು ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.
ಬಿಗಿಭದ್ರತೆ : ಭಕ್ತರು ಶಾಂತಿಯುತವಾಗಿ ಶ್ರೀಗಳ ದರ್ಶನ ಪಡೆಯಲು ಅನುಕೂಲವಾಗಲಿ ಎಂದು ಪೊಲೀಸ್ ಬಿಗಿ ಭದ್ರತೆಯನ್ನು ಏರ್ಪಡಿಸಲಾಗಿದೆ. ಉಜ್ಜಯಿನಿ ಶ್ರೀಗಳ ದರ್ಶನಕ್ಕಾಗಿ ವಿವಿಧೆಡೆಯಿಂದ ಆಗಮಿಸುವ ಭಕ್ತರಿಗೆ ಅಗತ್ಯ ನೆರವು ನೀಡಲು ಶ್ರೀಗಳ ಸದ್ಧರ್ಮ ವಿದ್ಯಾಪೀಠದ ಸದಸ್ಯರು, ವಿದ್ಯಾರ್ಥಿಗಳು, ಸಿಬ್ಬಂದಿ ಮತ್ತು ಗ್ರಾಮಸ್ಥರು ಮುಂದಾಗಿದ್ದಾರೆ.