ಯಡ್ಡಿ ಮತ್ತೆ ಜೈಲಿಗೆ ಹೋಗಲ್ಲ ಬಿಡಿ: ಸಿದ್ದು
ಎಲ್ಲರ ಮುಖ ನೋಡಿ ನಗೆಯಾಡಿದ ಸಿದ್ದು, ಯಡಿಯೂರಪ್ಪ ಅವರು ಚಾಣಾಕ್ಷ, ಅನಾರೋಗ್ಯದ ನೆಪವೊಡ್ಡಿ ಜಯದೇವ ಆಸ್ಪತ್ರೆ ಸೇರಿದ್ದಾರೆ. ರೋಗಿ ಬಯಸಿದ್ದು ಹಾಲು ಅನ್ನ, ವೈದ್ಯ ಹೇಳಿದ್ದು ಅದೇ ಎಂಬಂತೆ ಯಡಿಯೂರಪ್ಪ ಅವರ ಚಿಕಿತ್ಸೆಗಾಗಿ 48 ಗಂಟೆಗಳ ಕಾಲ ಬೇಕು ಎಂದು ಡಾ. ಮಂಜುನಾಥ್ ಅವರು ಹೇಳಿದ್ದಾರೆ.
ಹೀಗಾಗಿ ಅ.22ರ ವರೆಗೂ ನ್ಯಾಯಾಂಗ ಬಂಧನಕ್ಕೊಳಗಾಗಿರುವ ಯಡಿಯೂರಪ್ಪ ಅವರ ಆರೋಗ್ಯ ಸುಧಾರಿಸಿ ಮತ್ತೆ ಜೈಲಿನ ಮುಖ ನೋಡೋದೋ ನನಗ್ಯಾಕೋ ಡೌಟು ಎಂದು ಸಿದ್ದು ಹೇಳಿದ್ದಾರೆ.
ಅಧಿವೇಶನ ಕರೆದಿಲ್ಲ ಯಾಕೆ?: ನಾನು ಸೆಷನ್ ಕರೆಬೇಕು ಅಂತಾ ಎರಡು ತಿಂಗಳಿನಿಂದ ಹೇಳಿದ್ದೀನಿ. ರಾಜ್ಯದಲ್ಲಿ ತುಂಬಾ ಬರ್ನಿಂಗ್ ಇಶ್ಶೂಸ್ ಇದೆ.
ಬರಗಾಲ ಇದೆ 84 ತಾಲೂಕಿನಲ್ಲಿ ಎಂದು ಅವರೇ ಹೇಳಿಕೊಂಡಿದ್ದಾರೆ. ವಿದ್ಯುತ್ ಸಮಸ್ಯೆ ಕಣ್ಮುಂದೆ ಇದೆ ಆದರೆ, ಸಮಸ್ಯೆ ಬಗ್ಗೆ ಚರ್ಚಿಸಲು ಸರ್ಕಾರ ಸಿದ್ಧವಿಲ್ಲ.
ಅರ್ಧದಷ್ಟು ಕ್ಯಾಬಿನೆಟ್ ಸಚಿವರು ಭ್ರಷ್ಟಾಚಾರದ ಆರೋಪ ಹೊತ್ತಿದ್ದಾರೆ. ಸೋ, ಇಷ್ಟೊಂದು ಜನ ಕ್ರಿಮಿನಲ್ ಇರೋ ಸರ್ಕಾರ ಮುಂದುವರೆಯುವುದು ಸರಿಯಿಲ್ಲ. ನೈತಿಕತೆ ಇಲ್ಲದ ಸರ್ಕಾರ ವಿಧಾನಸಭೆ ವಿಸರ್ಜಿಸಿ, ರಾಜೀನಾಮೆ ಕೊಟ್ಟು ಮನೆಗೆ ಹೋದರೆ ಒಳ್ಳೆಯದು ಎಂದು ಸಿದ್ದು ಕಿಡಿಯಾಡಿದ್ದಾರೆ.
ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರೊಡನೆ ರಾಜಭವನದಲ್ಲಿ ಭಾನುವಾರ ಚರ್ಚೆ ನಡೆಸಿ ಹೊರ ಬಂದ ನಂತರ ಸಿದ್ದರಾಮಯ್ಯ ಅವರು ಬಿಜೆಪಿ ಹಾಗೂ ಯಡಿಯೂರಪ್ಪ ಅವರನ್ನು ತರಾಟೆ ತೆಗೆದುಕೊಂಡರು.