ಚೆಲುವನ ಜತೆ ಕುಮಾರಣ್ಣ ಜೈಲಿಗೆ ಭೇಟಿ ನೀಡಿದ್ದು ಯಾಕೆ?
ಶನಿವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಅವರು ಚೆಲುವ ನಾರಾಯಣ ಸ್ವಾಮಿ ಜತೆಗೂಡಿ ಜೈಲಿಗೆ ಹೋಗಿ ಬಂದ ವಿಷಯ ದೃಢಪಟ್ಟಿದೆ. ಯಡ್ಡಿ ಮೇಲೆ ಕುಮಾರಣ್ಣನಿಗೆ ಸಿಂಪತಿ ಮೂಡಿ ಮಾಜಿ ಮುಖ್ಯಮಂತ್ರಿಯೊಬ್ಬರು ಪ್ರವೇಶಿಸಲಿರುವ ಜೈಲಿನ ಸ್ಥಿತಿಗತಿ ಹೇಗಿದೆ ಎಂದು ನೋಡಿಕೊಂಡು ಬರಲು ಹೋಗಿದ್ದರಾ!? ಎಂದು ತಿಳಿಯುವುದು ಸರ್ವತಾ ಸಾಧುವಲ್ಲ ಎನಿಸುತ್ತದೆ.
ಸರಿ ಇಷ್ಟಾಗಿ, ಕುಮಾರಣ್ಣ ಯಾಕಪ್ಪಾ ಜೈಲಿಗೆ ಹೋಗಿದ್ದರು ಅಂದರೆ... ಅದೇ ನಮ್ಮ 'ಲೋಕ ಸೇವಕ' ಡಾ. ಎಚ್ಎನ್ ಕೃಷ್ಣ ಹೊರಗೆ ಮಾಡಿದ್ದು ಸಾಕು ಎಂದು ಒಳಗೆ ಹೋಗಿ ಏನು ಲೋಕ ಸೇವೆ ಮಾಡುತ್ತಿದ್ದಾರೋ ಎಂದು ನೋಡಿಕೊಂಡು ಬರಲು ಕುಮಾರಣ್ಣ ಹೋಗಿದ್ದರಂತೆ.
ಇನ್ನೂ ಹೇಳಬೇಕು ಅಂದರೆ ಇಬ್ಬರದೂ ಒಂದೇ ಜಿಲ್ಲೆ (ಹಾಸನ). ಅದಕ್ಕಾಗಿ ಕೃಷ್ಣನ (ಕೈದಿ ನಂಬರ್ 10359) ಯೋಗಕ್ಷೇಮ ವಿಚಾರಿಸಿಕೊಂಡು ಬರಲು ಕುಮಾರಣ್ಣ ಪರಪ್ಪನ ಅಗ್ರಹಾರಕ್ಕೆ ತೆರಳಿದ್ದರು ಎಂದು ಬಲ್ಲ ಮೂಲಗಳು ಹೇಳಿವೆ.
ಗುಟ್ಟಿನ ವಿಷಯ ಏನಪಾ ಅಂದರೆ 'ಲೋಕ ಸೇವಕ' ಕೃಷ್ಣ ಅವರು ಮಾಜಿ ಪ್ರಧಾನಿ ಸನ್ಮಾನ್ಯ ದೇವೇಗೌಡರ ಕ್ಯಾಂಡಿಟೇಟು. ಏನು ಡೌಟು? ಕೃಷ್ಣರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಕೂಡಿಸಿದ್ದು ಇದೇ ದೇವೇಗೌಡರು. ಅಲ್ಲಿಗೆ ಗೊತ್ತಾಯ್ತಲ್ಲ ಕುಮಾರಣ್ಣನಿಗೆ ಕೃಷ್ಣನ ಮೇಲೆ ಯಾಕೆ ಅಷ್ಟೊಂದು ಲವ್ವು ಅಂತ!?