ದೀಪಾವಳಿಯಂದು ಸ್ಫೋಟಕ್ಕೆ 5ಕೆಜಿ ಆರ್ ಡಿಎಕ್ಸ್?
ಅಂಬಾಲದ ಕಂಟೋನ್ಮೆಂಟ್ ರೈಲು ನಿಲ್ದಾಣದ ಹೊರಗೆ ನಿಲ್ಲಿಸಲಾಗಿದ್ದ ಕಾರೊಂದರಲ್ಲಿ ಭಾರೀ ಸ್ಫೋಟಕಗಳು ಪತ್ತೆಯಾಗಿರುವುದು ಮಾಹಿತಿಗೆ ಪುಷ್ಟಿ ನೀಡಿದೆ.
ಸುಮಾರು 5 ಕಿ.ಗ್ರಾಂ ಆರ್ಡಿಎಕ್ಸ್, ಎರಡು ಟೈಮರ್ಗಳು ಹಾಗೂ 5 ಸ್ಫೋಟಕ ಸಾಧನಗಳು ಪತ್ತೆಯಾಗಿತ್ತು. ಈ ಸ್ಪೋಟಕಗಳನ್ನು ಬಳಸಿ ದೆಹಲಿ, ಸೇರಿದಂತೆ ಪ್ರಮುಖ ನಗರಗಳಲ್ಲಿ ಬಾಂಬ್ ಸ್ಫೋಟ ನಡೆಸಲು ಉಗ್ರರು ಸಂಚು ರೂಪಿಸಿದ್ದರು ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.
ಜಮ್ಮು- ಕಾಶ್ಮೀರದಲ್ಲಿ ಲಷ್ಕರ್ ಎ ತೋಯ್ಬಾದ ಗುಂಪೊಂದು ಸಕ್ರಿಯವಾಗಿದೆ ಎಂದು ಕೇಂದ್ರ ಗುಪ್ತಚರ ಸಂಸ್ಥೆಗಳು ಮಾಹಿತಿ ನೀಡಿದ್ದವು. ಸ್ಫೋಟಕಗಳನ್ನು ಎಲ್ಇಟಿ ಪೂರೈಸಲಿದ್ದು, ಅದನ್ನು ಬಬ್ಬರ್ ಖಾಲಾ ಭಯೋತ್ಪಾದಕ ಗುಂಪು ದಿಲ್ಲಿಯಲ್ಲಿ ಬಳಸಲಿದೆ ಎಂದು ತಿಳಿದು ಬಂದಿದೆ ಎಂದು ಪೊಲೀಸ್ ಉಪಾಯುಕ್ತ ಅರುಣ್ ಕಂಪಾನಿ ಹೇಳಿದ್ದಾರೆ.
ಕಾರು ಹಾಗೂ ಆರ್ಡಿಎಕ್ಸ್ನ್ನು ಟ್ರಕ್ಕೊಂದರಲ್ಲಿ ದೆಹಲಿಗೆ ತರಲಾಗಿದೆ. ಕಾರಿನ ಮಾಲಕನ ಪತ್ತೆಗೆ ತನಿಖೆ ಸಂಸ್ಥೆಗಳು ಪ್ರಯತ್ನಿಸುತ್ತಿವೆ. ಅದು ಹರ್ಯಾಣದ ನೋಂದಣಿ ಸಂಖ್ಯೆ ಹೊಂದಿದೆ.
ಜಮ್ಮು ವಿಳಾಸದ ಸಿಹಿ ತಿಂಡಿಗಳ ಪೆಟ್ಟಿಗೆಯೊಂದೂ ಕಾರಿನಲ್ಲಿ ಪತ್ತೆಯಾಗಿದೆ. ಅಂಬಾಲ ರೈಲು ನಿಲ್ದಾಣವನ್ನು ಸುತ್ತುವರಿಯಲಾಗಿದೆ. ಪ್ರದೇಶದ ಎಲ್ಲ ರಸ್ತೆಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.
ಹುಬ್ಬಳ್ಳಿ ವಿಮಾನ ಹೈಜಾಕ್ ಹಾಗೂ ಮುಂಬೈ ಸಂಭಾವ್ಯ ದಾಳಿ ಎಚ್ಚರಿಕೆಯ ನಂತರ ಎಲ್ಲೆಡೆ ಹೆಚ್ಚಿನ ಭದ್ರತೆ ಕಲ್ಪಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.