ಡಾ.ಕೃಷ್ಣ ಕೊನೆಗೂ ಹೊರಟರು ಪರಪ್ಪನ ಅಗ್ರಹಾರ ಜೈಲಿಗೆ
ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಪೊಲೀಸರು ಕೃಷ್ಣ ಅವರನ್ನು ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ದರು. ರಾತ್ರಿ ಏಳು ಗಂಟೆ ಸುಮಾರಿಗೆ ಕಾರಾಗೃಹಕ್ಕೆ ಬಂದ ಕೃಷ್ಣಗೆ ಜೈಲಿನ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಾಯಿತು. 'ಕೃಷ್ಣಗೆ ಗುರುವಾರ ವಿಚಾರಣಾಧೀನ ಕೈದಿ ಸಂಖ್ಯೆ ನೀಡಲಾಗುತ್ತದೆ' ಎಂದು ಕಾರಾಗೃಹ ಮುಖ್ಯ ಅಧೀಕ್ಷಕ ಟಿಎಚ್ ಲಕ್ಷ್ಮಿನಾರಾಯಣ ಅವರು ತಿಳಿಸಿದ್ದಾರೆ.
ಆರೋಪಗಳು ಮೇಲ್ನೋಟಕ್ಕೆ ಸಾಬೀತಾದ ಹಿನ್ನೆಲೆಯಲ್ಲಿ ಅವರನ್ನು ನಾಳೆಯವರೆಗೂ ನ್ಯಾಯಾಂಗ ಬಂಧನಕ್ಕೆ ವಹಿಸಿ ನ್ಯಾಯಾಲಯ ಆದೇಶ ಹೊರಡಿಸಿತು. ಈ ನಡುವೆ ಕೃಷ್ಣ ಜಾಮೀನು ಅರ್ಜಿಯ ವಿಚಾರಣೆ ಪೂರ್ಣ ಗೊಂಡಿದ್ದು, ನ್ಯಾಯಾಧೀಶ ಕಿರಣ್ಕಿಣಿ ಆದೇಶವನ್ನು ಗುರುವಾರಕ್ಕೆ ಕಾಯ್ದಿರಿಸಿದರು. ಸಿಐಡಿ ಪೊಲೀಸರ ಪರವಾಗಿ ಹಿರಿಯ ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್ ಜಿ.ಅರುಂಧತಿ ಕುಲಕರ್ಣಿ ಅವರು ವಾದ ಮಂಡಿಸಿದರು.
ಪ್ರಕರಣವೇನು?: ಕೆಪಿಎಸ್ಸಿಯು 1998, 1999 ಮತ್ತು 2004ರಲ್ಲಿ ನಡೆಸಿದ ಗಜೆಟೆಡ್ ಪ್ರೊಬೆಷನರ್ (ಗ್ರೂಪ್ ಎ ಮತ್ತು ಬಿ) ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಆಯೋಗದ ಅಂದಿನ ಅಧ್ಯಕ್ಷ ಹಾಗೂ ನೇಮಕಾತಿ ಸಮಿತಿಯ ಸದಸ್ಯರಾಗಿದ್ದ ಎಚ್.ಎನ್. ಕೃಷ್ಣ ನೇಮಕಾತಿಗೆ ಸಂಬಂಧಿಸಿದಂತೆ ಪೂರ್ವಗ್ರಹ ಪೀಡಿತರಾಗಿದ್ದರು.
ಅಲ್ಲಾಭಕ್ಷಿ ಎಂಬ ಅಭ್ಯರ್ಥಿಗೆ ಮುಖ್ಯಪರೀಕ್ಷೆಗೆ ಹಾಜರಾಗದಂತೆ ಬೆದರಿಕೆವೊಡ್ಡಿ, ಆತನಿಂದ ಬಲವಂತವಾಗಿ ಹಾಜರಾತಿ ಹಾಗೂ ದಾಖಲೆಗಳಿಗೆ ಸಹಿ ಹಾಕಿಸಿಕೊಂಡು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಸಿಐಡಿಯ ತನಿಖಾ ವರದಿ ತಿಳಿಸಿತ್ತು.
ಈ ಹಿನ್ನೆಲೆಯಲ್ಲಿ ಸಂಬಂಧ ಸಿಐಡಿ ಪೊಲೀಸರು ಆ.12ರಂದು ನಗರದ ವಿಧಾನ ಸೌಧ ಪೋಲೀಸ್ ಠಾಣೆಯಲ್ಲಿ ಕೃಷ್ಣ ವಿರುದ್ಧ ಐಪಿಸಿ ಸೆಕ್ಷನ್ 417, 718, 465, 466, 468, 471, 506, 120ರಡಿ ಪ್ರಕರಣದ ದಾಖಲಿಸಿದ್ದರು. ಇದರಿಂದಾಗಿ ಕೃಷ್ಣ ಮಾಹಿತಿ ಆಯೋಗ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.