ಶ್ರೀರಾಮುಲುಗೆ 'ವಾಲ್ಮೀಕಿ ದಿನಾಚರಣೆ'ಯ ಭರ್ಜರಿ ಗಿಫ್ಟ್
ಶ್ರೀರಾಮುಲುಗೆ ಮತ್ತೆ ಮಂತ್ರಿ ಪದವಿ ನೀಡುವುದು ಕಾನೂನಿನ ನೆಲೆಯ ಸೂಕ್ತವಲ್ಲ ಎಂದು ರಾಜ್ಯದ ಅಡ್ವೊಕೇಟ್ ಜನರಲ್ ಬಿ ವಿ ಆಚಾರ್ಯ ಅವರ ಅಭಿಪ್ರಾಯವನ್ನು ಅನುಮೋದಿಸುವ ಧಾಟಿಯಲ್ಲಿ ಮಾತನಾಡಿರುವ ಈಶ್ವರಪ್ಪ 'ಯಾವುದೇ ಕಾರಣಕ್ಕೂ ಶ್ರೀರಾಮುಲು ಅವರನ್ನು ಮತ್ತೆ ಸಂಪುಟಕ್ಕೆ ತೆಗೆದುಕೊಳ್ಳದಿರಲು ಪಕ್ಷ ನಿರ್ಧರಿಸಿದೆ' ಎಂದಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಾಲ್ಮೀಕಿ ದಿನಾಚರಣೆ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಅವರು ಶ್ರೀರಾಮುಲುಗೆ ಸಚಿವ ಸಂಪುಟದಲ್ಲಿ ಸ್ಥಾನ ಇಲ್ಲವೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಲೋಕಾಯುಕ್ತ ವರದಿಯಲ್ಲಿ ಶ್ರೀರಾಮುಲು ಹೆಸರು ಪ್ರಸ್ತಾಪವಾಗಿರುವುದರಿಂದ ಅವರಿಗೆ ಸಚಿವ ಸ್ಥಾನ ನೀಡಲಾಗುವುದಿಲ್ಲ. ನಾವು ಲೋಕಾಯುಕ್ತ ವರದಿಯನ್ನು ಗೌರವಿಸುತ್ತೇವೆ. ವರದಿ ಕಾರಣಕ್ಕೆ ಬಳ್ಳಾರಿ ರೆಡ್ಡಿ ಸೋದರರಿಗೆ ಸಚಿವ ಸಂಪುಟದಲ್ಲಿ ಸ್ಥಾನವಿಲ್ಲ ಎಂದರು.
ಕಳೆದ ವಾರ ಕಾನೂನು ಸಚಿವ ಎಸ್. ಸುರೇಶ್ ಕುಮಾರ್ ಆದಿಯಾಗಿ ಬಳ್ಳಾರಿ ಭಾಗದವರು ಶ್ರೀರಾಮುಲುಗೆ ಮತ್ತೆ ಸಚಿವ ಸ್ಥಾನ ನೀಡಬೇಕು ಎಂದು ಭಾರಿ ಒತ್ತಡ ಹೇರಿದ್ದನ್ನು ಇಲ್ಲಿ ಸ್ಮರಿಸಬಹುದು.