ಸಮಾಜ ಕಲ್ಯಾಣ ಇಲಾಖೆಯ ಕೃಪೆ 11ರ ಬಾಲಕಿ ಗರ್ಭಿಣಿ
ತಾಲ್ಲೂಕಿನ ತಮದಡ್ಡಿ ಗ್ರಾಮದ ಈ ಬಾಲಕಿಗೆ ತನಗೇನಾಗಿದೆ ಎಂಬ ಕಲ್ಪನೆ ಸಹ ಇಲ್ಲ. ಆದರೆ ಈ ಎಲ್ಲ ಜವಾಬ್ದಾರಿಗಳಿಂದ ತಪ್ಪಿಸಿಕೊಳ್ಳಲು ವಸತಿ ನಿಲಯದ ಅಧಿಕಾರಿಗಳು ಹಾಗೂ ಶಾಲೆಯಲ್ಲಿ ಕಲಿಸುವ ಗುರುಗಳು ಪ್ರಯತ್ನ ನಡೆಸಿದ್ದಾರೆ ಎಂದು ಹೇಳಲಾಗಿದೆ. ಈ ಸಂಬಂಧ ದೂರು ದಾಖಲಾಗಿಲ್ಲ.
'ಬಾಲಕಿ ಗರ್ಭಿಣಿಯಾಗಿರುವ ಬಗ್ಗೆ ನನಗೆ ಅನಧಿಕೃತವಾಗಿ ಗೊತ್ತಾಗಿದೆ. ಈ ಕುರಿತು ಸಿಬ್ಬಂದಿಯನ್ನು ವಿಚಾರಿಸಿ, ವೈದ್ಯರನ್ನು ಭೇಟಿ ಮಾಡಿ, ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳಿಗೆ ವರದಿ ನೀಡುತ್ತೇನೆ. ತಪ್ಪಿತಸ್ಥರು ನಮ್ಮ ಇಲಾಖೆಯವರೇ ಆಗಿದ್ದರೆ ಅವರ ವಿರುದ್ಧ ಕ್ರಮ ಜರುಗಿಸುತ್ತೇವೆ' ಎಂದು ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿ ಡಿ.ಎನ್. ಕಪಟಕರ ತಿಳಿಸಿದ್ದಾರೆ.
ವಾಂತಿ ಮಾಡಿಕೊಂಡ ಬಾಲಕಿಯನ್ನು ವಸತಿ ನಿಲಯದ ಪುರುಷ ಸಿಬ್ಬಂದಿ ಪಟ್ಟಣದ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ತೋರಿಸಿದಾಗ ಆಕೆ ಗರ್ಭಿಣಿ ಎಂಬ ಸತ್ಯ ಹೊರ ಬಿದ್ದಿದೆ. ವಸತಿನಿಲಯದ ಹೆಣ್ಣು ಮಕ್ಕಳು ಅನಾರೋಗ್ಯದಿಂದ ಬಳಲಿದರೆ ಸರ್ಕಾರಿ ಆಸ್ಪತ್ರೆಗೆ ತೋರಿಸಬೇಕು ಎಂದು ಸುತ್ತೋಲೆಗಳು ಇದ್ದರೂ ಇದನ್ನು ಬಿಟ್ಟು ಆಕೆಯನ್ನು ಖಾಸಗಿ ಆಸ್ಪತ್ರೆಗೆ ತೋರಿಸಲಾಗಿದೆ.
ನಂತರ ಆ ಬಾಲಕಿಯನ್ನು ತಮದಡ್ಡಿ ಗ್ರಾಮದಲ್ಲಿರುವ ಪಾಲಕರ ವಶಕ್ಕೆ ಒಪ್ಪಿಸಿ, ಅವರಿಂದ ಏಳು ತಿಂಗಳ ಹಿಂದೆಯೇ ಅಂದರೆ ಶಾಲೆ ಶುರುವಾಗುವ ಮುಂಚೆಯೇ ಗ್ರಾಮದಲ್ಲಿಯೇ ಈ ಕೃತ್ಯ ನಡೆದಿತ್ತು ಎಂಬ ಅರ್ಥ ಬರುವಂತಹ ಸಮಜಾಯಿಷಿ ಪತ್ರವನ್ನು ಅಧಿಕಾರಿಗಳು ಬರೆಯಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.